ಒಳ್ಳೆ ಸಿನಿಮಾ ಕೊಲೆಯಾದಂತಾಗುತ್ತೆ, ಮಾ.31ರಂದು ರಾತ್ರಿ ಗೊತ್ತಾಗಿದ್ರೂ ರಿಲೀಸ್ ಮಾಡ್ತಿರ್ಲಿಲ್ಲ: ಪುನೀತ್

Public TV
1 Min Read

ಬೆಂಗಳೂರು: ಸರ್ಕಾರದ ಈ ನಿರ್ಧಾರದಿಂದ ಒಳ್ಳೆಯ ಸಿನಿಮಾ ಕೊಲೆಯಾದಂತಾಗುತ್ತದೆ. ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಎಂದು ಮಾ.31ರಂದು ರಾತ್ರಿ ಘೋಷಣೆ ಮಾಡಿದ್ದರೂ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದೆವು ಎಂದು ನಟ ಪುನೀತ್ ರಾಜ್‍ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

8 ಜಿಲ್ಲೆಗಳ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಸ್ಥಾನ ಭರ್ತಿಗೆ ಮಾತ್ರ ಅವಕಾಶ ಎಂಬ ನಿಯಮದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ಬಿಡುಗಡೆಗೂ 4-5 ದಿನದ ಮೊದಲೇ ಗೊತ್ತಾಗಿದ್ದರೆ ರಿಲೀಸ್ ಮಾಡುತ್ತಿರಲಿಲ್ಲ, ದಿನಾಂಕ ಮುಂದೆ ಹಾಕುತ್ತಿದ್ದೆವು. ಈಗ ಭಾನುವಾರದವರೆಗೆ ಟಿಕೆಟ್ ಕೊಟ್ಟಿದ್ದೇವೆ. ಇದ್ದಕ್ಕಿದ್ದಂತೆ ಈ ರೀತಿ ಘೋಷಣೆ ಮಾಡಿದರೆ ಹೇಗೆ? ನಾವು ಸುಧಾರಿಸಿಕೊಳ್ಳುವುದು ಕಷ್ಟ. ಮಾರ್ಚ್ 31ರಂದು ರಾತ್ರಿ ಗೊತ್ತಾಗಿದ್ದರೂ ನಾವು ಬಿಡುಗಡೆ ಮಾಡುತ್ತಿರಲಿಲ್ಲ. ಈಗ ಬಿಡುಗಡೆಯಾಗಿ ಸಿನಿಮಾವನ್ನು ಜನ ಇಷ್ಟಪಟ್ಟು ನೋಡುತ್ತಿರುವಾಗ ಈ ರೀತಿ ಘೋಷಣೆ ಮಾಡಿದರೆ ಒಳ್ಳೆ ಸಿನಿಮಾವನ್ನು ಕೊಲೆ ಮಾಡಿದಂತಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.

ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು. ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ಎಂದು ಹೇಳುವುದು ಸುಲಭ. ಆದರೆ ಎಲ್ಲ ಬ್ಯುಸಿನೆಸ್ ಈ ರೀತಿ ಕೆಲಸ ಮಾಡಲ್ಲ. ಇದರಿಂದಾಗಿ ವಿತರಕರು, ಸಿನಿಮಾ ತಂಡ ಸೇರಿದಂತೆ ಎಲ್ಲರಲ್ಲೂ ಗೊಂದಲ ಉಂಟಾಗುತ್ತದೆ. ಮುಖ್ಯಮಂತ್ರಿಗಳ ಜೊತೆ ಮಾತನಾಡುವ ಕೆಲಸ ಸಹ ಆಗಬೇಕಿದೆ. ಸರ್ಕಾರದ ಜೊತೆ ಮಾತನಾಡಿ ಕಾಲಾವಕಾಶ ಕೊಡಿ ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಕೊರೊನಾವನ್ನು ವರ್ಷದಿಂದ ಎದುರಿಸುತ್ತ ಬಂದಿದ್ದೇವೆ. ಕೊರೊನಾ ಕಡಿಮೆಯಾಗುತ್ತ ಬಂದಂತೆ ಎಲ್ಲ ಕೆಲಸಗಳು ಆರಂಭವಾಯಿತು. ಹಾಗೇ ಸಿನಿಮಾ ಚಟುವಟಿಕೆಗಳು ಸಹ ಶುರುವಾಯಿತು. ಶೂಟಿಂಗ್ ಸೇರಿದಂತೆ ಎಲ್ಲವೂ ಆರಂಭವಾಯಿತು. ಬಳಿಕ ಜನವರಿಯಿಂದ ಸಿನಿಮಾಗಳು ಸಹ ಬಿಡುಗಡೆಯಾದವು. ಈಗ ಇದ್ದಕ್ಕಿಂತೆ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *