ಒಂದೇ ತನಿಖೆಗೆ ಎರಡು ರೀತಿ ತನಿಖಾ ವರದಿ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ

Public TV
1 Min Read

– ಆಯುಕ್ತರ ತನಿಖೆ ಬಗ್ಗೆಯೆ ಈಗ ಅನುಮಾನ

ಮೈಸೂರು: ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮೈಸೂರು ಡಿಸಿ ಅಧಿಕೃತ ಸರ್ಕಾರಿ ನಿವಾಸದ ಆವರಣದಲ್ಲಿ ನಿರ್ಮಿಸಿದ್ದ ಈಜುಕೊಳ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದದ ತನಿಖೆಗೆ ಸರ್ಕಾರ ಆದೇಶಿಸಿತ್ತು. ಈಗ ತನಿಖಾ ವರದಿ ಬಂದಿದೆ. ಆದರೆ ಈ ತನಿಖಾ ವರದಿಯೂ ವಿವಾದಕ್ಕೆ ಒಳಗಾಗಿದೆ.

ಕಾರಣ ಒಂದೇ ದಿನದಲ್ಲಿ ಈ ತನಿಖಾ ವರದಿಯ ಅಂಶಗಳು ಬದಲಾಗಿವೆ. ಒಂದೇ ದಿನದಲ್ಲಿ ಎರಡು ರೀತಿಯ ತನಿಖಾ ರಿಪೋರ್ಟ್ ಅನ್ನು ಮೈಸೂರು ಪ್ರಾದೇಶಿಕ ಆಯುಕ್ತರು ಬರೆದಿದ್ದಾರೆ. ಈಜುಕೊಳದ ತನಿಖೆಯ ಜವಾಬ್ದಾರಿ ಹೊತ್ತಿದ್ದ ಪ್ರಾದೇಶಿಕ ಆಯುಕ್ತರು, ಈಜುಕೊಳ ನಿರ್ಮಾಣದ ತನಿಖೆ ವಿಚಾರದಲ್ಲಿ ಒಂದೇ ದಿನದಲ್ಲಿ ಎರಡು ತನಿಖಾ ವರದಿ ಬರೆದಿರೋದು ಈಗ ಬೆಳಕಿಗೆ ಬಂದಿದೆ. ಮೊದಲ ವರದಿಯಲ್ಲಿ ಒಟ್ಟು 6 ನ್ಯೂನತೆ ನಮೂದು ಮಾಡಲಾಗಿತ್ತು. ಸರ್ಕಾರಕ್ಕೆ ಸಲ್ಲಿಕೆಯಾದ ಎರಡನೇ ವರದಿಯಲ್ಲಿ ಕೇವಲ ಎರಡೇ ನ್ಯೂನತೆ ನಮೂದಾಗಿರೋದು ಅಚ್ಚರಿಗೆ ಕಾರಣವಾಗಿದೆ. ಮೊದಲ ವರದಿಯಲ್ಲಿ ಪ್ರಮುಖವಾಗಿ ಈಜುಕೊಳದ ನಿರ್ಮಾಣಕ್ಕೆ ತಯಾರಾಗಿದ್ದ 32 ಲಕ್ಷ ರೂ ಅಂದಾಜುಪಟ್ಟಿಗೆ ಲೋಕೋಪಯೋಗಿ ಇಲಾಖೆ ಅನುಮೋದನೆ ಪಡೆದಿಲ್ಲ ಹಾಗೂ ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳಿಲ್ಲ ಎಂದು ನಮೂದು ಮಾಡಲಾಗಿತ್ತು. ಆದರೆ, ಎರಡನೇ ತನಿಖಾ ವರದಿಯಲ್ಲಿ ಪ್ರಮುಖವಾದ ಈ ಎರಡು ಅಂಶ ದಿಢೀರ್ ಎಂದು ಕೈ ಬಿಟ್ಟಿದ್ದಾರೆ. ಇದನ್ನೂ ಓದಿ: ನಿಯಮಗಳನ್ನು ಗಾಳಿಗೆ ತೂರಿ ಈಜುಕೊಳ ನಿರ್ಮಿಸಿದ್ರು ರೋಹಿಣಿ ಸಿಂಧೂರಿ – ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಪ್ರಾದೇಶಿಕ ಆಯುಕ್ತರು ಕೊಟ್ಟ ಮೊದಲ ವರದಿಯಲ್ಲಿ ಈಜುಕೊಳ ನಿರ್ಮಾಣದಲ್ಲಿ ಆಗಿರೋ ಆರ್ಥಿಕ ವಿಚಾರ ಗೌಪ್ಯವಾಗಿರೋದೆ ಪ್ರಮುಖ ಲೋಪ ಎಂದು ಪರೋಕ್ಷವಾಗಿ ನಮೂದಾಗಿತ್ತು. ಆದರೆ ಇದೇ ಅಂಶವನ್ನೇ ಕೈಬಿಟ್ಟು ದಿಢೀರ್ ಎರಡನೇ ಎಡಿಟೆಡ್ ವರದಿ ಕೊಡಲಾಗಿದೆ. ಹಾಗಾದರೆ ಪ್ರಾದೇಶಿಕ ಆಯುಕ್ತರು ಸರ್ಕಾರವನ್ನೇ ಯಾಮಾರಿಸಿದ್ರು ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಬಗ್ಗೆಯೆ ಅನುಮಾನಗಳು ಸೃಷ್ಟಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *