ಒಂದು ವರ್ಷ ಮಕ್ಕಳಿಗೆ ಪ್ರಮೋಷನ್ ಕೊಟ್ಟರೆ ನಷ್ಟವಿಲ್ಲ: ಟಿ.ಎನ್ ಸೀತಾರಾಮ್

Public TV
1 Min Read

ಬೆಂಗಳೂರು: ಕೊರೊನಾ ವೈರಸ್ ರೌದ್ರತೆಯ ನಡುವೆಯೇ ಶಾಲೆ ಆರಂಭ ಮಾಡಲು ಸರ್ಕಾರ ಮುಂದಾಗುತ್ತಿದ್ದು, ಪೋಷಕರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಈ ಸಂಬಂಧ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ಇಂತಹ ಕೊರೊನಾ ಅಬ್ಬರದಲ್ಲಿ ಪುಟ್ಟ ಮಕ್ಕಳ ಶಾಲೆಗಳನ್ನು ಬೇರೆ ತೆರೆಯುತ್ತಾರಂತೆ. ಯಾವ ವಾದ ಏನೇ ಇರಲಿ ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೊನಾ ಸಂಬಂಧಿತ ಅಪಾಯವಾದರೆ ಇಡೀ ರಾಜ್ಯದ ತಂದೆ-ತಾಯಿಗಳು ಆತಂಕ, ಹಿಂಸೆ ಪಡಲು ಶುರು ಮಾಡುತ್ತಾರೆ. ಹೆಚ್ಚು ಆದರಂತೂ ರಾಜ್ಯದ ಅಂತಃಕಳೆ ಮಂಕಾಗಿ ಎಲ್ಲರೂ ಪಾಪ ಪ್ರಜ್ಞೆ ಅನುಭವಿಸ ಬೇಕಾಗುತ್ತದೆ.

ಬೇಕಾ ಇದೆಲ್ಲಾ… ಒಂದು ವರ್ಷ ಮಕ್ಕಳಿಗೆ ಸುಮ್ಮನೆ ಪ್ರಮೋಷನ್ ಕೊಟ್ಟರೆ ನಷ್ಟ ವೇನಿಲ್ಲ. ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ ಬುದ್ಧ, ಚಾಣಾಕ್ಷತೆ ಮಕ್ಕಳಿಗಿರುತ್ತದೆ. ಸದ್ಯಕ್ಕೆ ಶಾಲೆ ಶುರುಮಾಡುವುದು ಬೇಡ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಮಧ್ಯಾಹ್ನ 3 ಗಂಟೆಗೆ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಶಾಲೆ ತೆರೆಬೇಕೇ ಬೇಡವೇ ಎಂಬ ಬಗ್ಗೆ ನಿರ್ಧಾರವಾಗುವ ನಿರೀಕ್ಷೆ ಇದೆ. ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಸಿಎಂ ಅಭಿಪ್ರಾಯ ಪಡೆಯಲಿದ್ದಾರೆ. ಜಿಲ್ಲೆಗಳಲ್ಲಿ ಶಾಲೆಗಳನ್ನು ತೆರೆಯಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಡಿಸಿಗಳ ಜೊತೆ ಸಭೆ ನಡೆಸಲಿದ್ದು, ಶಾಲೆ ತೆರೆದರೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ಚರ್ಚೆ ನಡೆಯಬಹುದು ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *