ಐಪಿಎಲ್‍ಗಾಗಿ ದುಬೈಗೆ ಹಾರಲಿದ್ದಾರೆ ಬಂಗಾಳದ ದಿನಗೂಲಿ ಕೆಲಸಗಾರ

Public TV
2 Min Read

– ಮೊದಲ ಬಾರಿಗೆ ವಿಮಾನಯಾನ ಮಾಡುತ್ತಿದ್ದಾರೆ ಸೂರ್ಯಕಾಂತ್

ಕೋಲ್ಕತ್ತಾ: ಪಶ್ಚಿಮಾ ಬಂಗಾಳದ ಕಿರಾಣಿ ಅಂಗಡಿಯಲ್ಲಿ ದೈನಂದಿನ ಕೂಲಿ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಭಾಗವಹಿಸಲು ಯುಎಇಗೆ ಹಾರಲಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಿನ್ಸುರಾಹ್ ನಿವಾಸಿ 32 ವರ್ಷದ ಸೂರ್ಯಕಾಂತ್ ಪಾಂಡಾ ಐಪಿಎಲ್-2020ಯ ಸ್ಕೋರ್ ಕೀಪರ್ ಆಗಿ ಸೆಲೆಕ್ಟ್ ಆಗಿದ್ದಾರೆ. 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಸೂರ್ಯಕಾಂತ್, ಜೀವನೋಪಾಯಕ್ಕಾಗಿ ದಶಕಗಳ ಹಿಂದೆ ಒಡಿಶಾದಿಂದ ಬಂಗಾಳಕ್ಕೆ ಕುಟುಂಬ ಸಮೇತ ವಲಸೆ ಬಂದಿದ್ದರು.

ಐಪಿಎಲ್‍ನ ಎಲೆಕ್ಟ್ರಾನಿಕ್ ಸ್ಕೋರರ್ ಆಗಿ ದುಬೈಗೆ ಪ್ರಯಾಣಿಸಲು ಸೂರ್ಯಕಾಂತ್ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿದ್ದಾರೆ. ಸೂರ್ಯಕಾಂತ್ ಕ್ರಿಕೆಟಿಗನಾಗಬೇಕೆಂಬ ಕನಸು ಕಂಡಿದ್ದರು ಆದರೆ ಅವರು ಪಶ್ಚಿಮ ಬಂಗಾಳಕ್ಕೆ ಬಂದ ನಂತರ ಕುಟುಂಬದ ಆರ್ಥಿಕ ಸಮಸ್ಯೆಯಿಂದ ಅವರು ಕ್ರಿಕೆಟ್‍ಗೆ ಸೇರಲು ಆಗಲಿಲ್ಲ. ತಂದೆ ಆಡುಗೆ ಕೆಲಸ ಮಾಡುವಾಗ ಸೂರ್ಯಕಾಂತ್ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.

ಚಿಕ್ಕ ವಯಸ್ಸಿನಿಂದ ಕ್ರಿಕೆಟರ್ ಆಗುವ ಕನಸು ಕಂಡಿದ್ದ ಸೂರ್ಯಕಾಂತ್, 2002-2003ರ ಅವಧಿಯಲ್ಲಿ ಹೂಗ್ಲಿ ಜಿಲ್ಲಾ ಕ್ರೀಡಾ ಸಂಘದ ಆಧಾರದ ಮೇಲೆ ಕೆಲವು ಪಂದ್ಯಗಳನ್ನು ಆಡಿದರು. ಆದರೆ ಅದನ್ನು ಮುಂದುವರಿಸಲು ಆಗಲಿಲ್ಲ. ಈ ಕಾರಣಕ್ಕೆ ಯಾವಾಗಲೂ ಕ್ರಿಕೆಟ್‍ನೊಂದಿಗೆ ಸಂಪರ್ಕದಲ್ಲಿರಲು ಬಯಸಿ ಎಲೆಕ್ಟ್ರಾನಿಕ್ ಸ್ಕೋರರ್ ಆಗುವ ದಾರಿಯನ್ನು ಆಯ್ಕೆ ಮಾಡಿಕೊಂಡರು.

ಈ ವಿಚಾರವಾಗಿ ರಾಷ್ಟ್ರೀಯ ಮಾಧ್ಯಮಗಳ ಜೊತೆ ಮಾತನಾಡಿರುವ ಸೂರ್ಯಕಾಂತ್, ನಾನು ಕ್ರಿಕೆಟಿಗನಾಗಲು ಬಯಸಿದ್ದೆ. ಆದರೆ ಹಲವಾರು ಕುಟುಂಬ ಸಮಸ್ಯೆಗಳಿಂದಾಗಿ ನನಗೆ ಅದು ಸಾಧ್ಯವಾಗಲಿಲ್ಲ. ಆಗ ನಾನು ಯಾವಾಗಲೂ ಆಟದೊಂದಿಗೆ ಸಂಪರ್ಕದಲ್ಲಿರಲು ಬಯಸಿ ಸ್ಕೋರರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ಅಂತೆಯೇ 2015 ರಲ್ಲಿ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಪಾಸ್ ಆಗಿ ಸ್ಕೋರರ್ ಅದೆ ಎಂದು ಹೇಳಿದ್ದಾರೆ.

2015ರ ನಂತರ ಕೆಲ ದಿನ ಅವರು ಸ್ಕೋರರ್ ಆಗಿ ಕೆಲಸ ಮಾಡಲು ಆಗಲಿಲ್ಲ. ಆದರೆ ನಂತರದ ದಿನದಲ್ಲಿ ಸಿಎಬಿ ನಡೆಸಿದ ಹೆಚ್ಚಿನ ಪಂದ್ಯಗಳಲ್ಲಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದರು. ಅವರ ಸತತ ಪ್ರಯತ್ನ ಮತ್ತು ದೃಢನಿಶ್ಚಯದ ಫಲವಾಗಿ ಅವರಿಗೆ 2018ರಲ್ಲಿ ಅತ್ಯುತ್ತಮ ಸ್ಕೋರರ್ ಪ್ರಶಸ್ತಿ ಲಭಿಸಿತ್ತು. ಇದನ್ನು ಸಿಎಬಿ ಕಾರ್ಯದರ್ಶಿ ಅವಿಶೇಕ್ ಡಾಲ್ಮಿಯಾ ಅವರು ನೀಡಿದ್ದರು. ಈಗ ಐಪಿಎಲ್‍ನಲ್ಲಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಲು ಸೂರ್ಯಕಾಂತ್ ಆಯ್ಕೆ ಆಗಿದ್ದಾರೆ.

ಸದ್ಯ ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ನಡೆಸುವ ಕ್ರಿಕೆಟ್ ಪಂದ್ಯಗಳಿಗೆ ಸ್ಕೋರರ್ ಆಗಿರುವ ಸೂರ್ಯಕಾಂತ್ ಮುಂದೆ ಬಿಸಿಸಿಐ ನಡೆದುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಷ್ಟ್ರೀಯ ಪಂದ್ಯಗಳಿಗೆ ಕೆಲಸ ಮಾಡಬೇಕೆಂಬ ಕನಸು ಕಾಣುತ್ತಿದ್ದಾರೆ. ಸೂರ್ಯಕಾಂತ್ ಅವರು ಇಂದು ಬಂಗಾಳದಿಂದ ಬೆಂಗಳೂರಿಗೆ ವಿಮಾನದಲ್ಲಿ ಬರಲಿದ್ದು ಬಳಿಕ ಆಗಸ್ಟ್ 27 ರಂದು ದುಬೈ ವಿಮಾನ ಹತ್ತಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *