‘ಏನೋ ಸಿಗ್ನಲ್’- ನೆಟ್ಟಿಗರ ಅನುಮಾನಕ್ಕೆ ತೆರೆ ಎಳೆದ ಸ್ಯಾಂಡಲ್‍ವುಡ್ ಸಿಂಡ್ರೆಲಾ

Public TV
3 Min Read

ಬೆಂಗಳೂರು: ರಾಜ್ಯ ಸರ್ಕಾರದ ಲಾಕ್‍ಡೌನ್ ನಿಯಮಗಳ ಕುರಿತು ರಾಕಿಂಗ್ ಸ್ಟಾರ್ ಯಶ್ ಮಾಡಿದ ಪೋಸ್ಟ್ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಲಾಕ್‍ಡೌನ್ ಕುರಿತು ಯಶ್ ಮಾಡಿರುವ ಪೋಸ್ಟ್ ಹೊರತು ರಾಖಿ ಭಾಯ್ ಇನ್ನೇನೋ ಸಿಗ್ನಲ್ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿತ್ತು. ಅನುಮಾನಕ್ಕೆ ಸ್ವತಃ ನಟಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಉತ್ತರಿಸಿದ್ದಾರೆ.

ಲಾಕ್‍ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿರುವ ಯಶ್ ದಂಪತಿ, ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದು, ಇದೇ ಗ್ಯಾಪ್‍ನಲ್ಲಿ ಕೆಜಿಎಫ್-2 ಸಿನಿಮಾದ ಕುರಿತು ಸಹ ಅಪ್‍ಡೇಟ್ಸ್ ನೀಡುತ್ತಿದ್ದಾರೆ. ಆದರೆ ತುಂಬಾ ದಿನಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದೂ ಸಹ ಲಾಕ್‍ಡೌನ್ ರೂಲ್ಸ್ ಕುರಿತು, ಈ ಪೋಸ್ಟ್ ಲಾಕ್‍ಡೌನ್ ರೂಲ್ಸ್ ಬಗ್ಗೆ ಗಮನ ಸೆಳೆದಿದ್ದಕ್ಕಿಂತ ಹೆಚ್ಚಾಗಿ ಬೇರೆಯದೇ ವಿಷಯದ ಕುರಿತು ವೈರಲ್ ಆಗಿತ್ತು. ಹೀಗಾಗಿ ಸ್ವತಃ ರಾಧಿಕಾ ಪಂಡೀತ್ ಪ್ರತಿಕ್ರಿಯಿಸಿ ಈ ಕುರಿತು ಸ್ಪಷ್ಟಪಡಿಸಿದ್ದಾರೆ.

ಅದ್ಯಾವ ವಿಷಯ ಏನು ಚರ್ಚೆ ಅಂತೀರಾ, ಅದೇ ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿಯಾಗಿದ್ದಾರೆ ಎಂಬ ಕುರಿತು. ಹೌದು ಪತ್ನಿ ಗರ್ಭಿಣಿಯಾಗಿದ್ದಾರೆ ಎಂಬ ಸಿಗ್ನಲ್ ನೀಡಲು ರಾಮಾಚಾರಿ ಈ ಪೋಸ್ಟ್ ಮಾಡಿದ್ದಾರೆ ಎಂದು ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಕಾರಣ ಯಶ್ ಹಾಕಿದ್ದ ಪೋಟೋದಲ್ಲಿ ಮೂರು ಬೆರಳು ತೋರಿಸಿದ್ದು. ಹೀಗಾಗಿ ಮೂರನೇ ಮಗು ಬರುತ್ತಿರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಕುರಿತು ಕಮೆಂಟ್ ಮಾಡುವ ಮೂಲಕ ಸ್ಯಾಂಡಲ್‍ವುಡ್ ಸಿಂಡ್ರೆಲಾ ಪ್ರತಿಕ್ರಿಯಿಸಿದ್ದಾರೆ. ಯಶ್ ಇನ್‍ಸ್ಟಾಗ್ರಾಮ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಅವರು, ಒಳ್ಳೆಯದು, ಒಬ್ಬ ಜವಾಬ್ದಾಯುತ ಪ್ರಜೆಯಾಗಿ ಈಗಲಾದರೂ ನನ್ನ ನಿಯಮಗಳನ್ನು ಪಾಲಿಸುತ್ತಿದ್ದೀಯಲ್ಲಾ ಎಂದಿದ್ದಾರೆ.

ಗರ್ಭಿಣಿಯಾಗಿರುವ ಕುರಿತು ಉತ್ತರಿಸಿರುವ ಅವರು, ಸಿಗ್ನಲ್ ನೀಡಿದ್ದಾರೆ ಎಂಬ ಕುರಿತು ಯಾರೆಲ್ಲ ಯೋಚಿಸಿದ್ದೀರೋ ಅವರಿಗೆ ಉತ್ತರಿಸಲು ಬಯಸುತ್ತೇನೆ. ನಾನು ಗರ್ಭಿಣಿಯಾಗಿಲ್ಲ ಎಂದು, ಇಂಗ್ಲಿಷ್‍ನಲ್ಲಿ ನೋ ಐ ಆ್ಯಮ್ ನಾಟ್ ಪ್ರಗ್ನೆಂಟ್ ಎಂದು ಕಮೆಂಟ್ ಮಾಡಿದ್ದಾರೆ. ಈ ಮೂಲಕ ಹಲವರ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

ಭಾನುವಾರವಷ್ಟೇ ಯಶ್ ಲಾಕ್‍ಡೌನ್ ಕುರಿತು ಪೋಸ್ಟ್ ಮಾಡಿದ್ದರು. ತಮ್ಮ ಪತ್ನಿ ಜೊತೆಗಿರುವ ಫೋಟೋ ಅಪ್‍ಲೋಡ್ ಮಾಡಿ ಅದಕ್ಕೆ ಸಾಲುಗಳನ್ನು ಬರೆದಿದ್ದ ರಾಮಾಚಾರಿ, ಕರ್ನಾಟಕ ಸರ್ಕಾರ ಲಾಕ್‍ಡೌನ್ ಹೊಸ ನಿಯಮಗಳನ್ನು ಘೋಷಿಸಿದೆ. ಯಾಕೆ ಎಂದು ತಿಳಿದಿಲ್ಲ, ಇದನ್ನೇ ಇಟ್ಟುಕೊಂಡು ನನ್ನ ಹೆಂಡತಿ ನಿಯಮಗಳನ್ನು ರೂಪಿಸುತ್ತಾಳೆ. ಪ್ರತಿ ದಿನ ರಾತ್ರಿ 8ಕ್ಕೆ ಮನೆಗೆ ಬರಬೇಕು, ಭಾನುವಾರ ಸಂಪೂರ್ಣ ಲಾಕ್‍ಡೌನ್ ಎಂದು ಹೇಳುತ್ತಾಳೆ ಎಂದು ಪೋಸ್ಟ್ ಮಾಡುವ ಮೂಲಕ ಎಚ್ಚರಿಸಿದ್ದರು.

ಏನೇ ಆಗಲಿ ಈ ಪತ್ನಿ ಸ್ನೇಹಿ ನಿಯಮಗಳು ಸ್ವಾಸ್ಥ್ಯ ಹಾಗೂ ಸುರಕ್ಷತೆ ಕಾಪಾಡುವಲ್ಲಿ ಸಹಾಯವಾಗಲಿವೆ. ಟೇಕ್ ಕೇರ್ ಗಾಯ್ಸ್ ಎಂದು ಬರೆದಿದ್ದು, ಈ ಪೋಸ್ಟ್‍ಗೆ ಪತ್ನಿ ರಾಧಿಕಾ ಪಂಡಿತ್ ಅವರನ್ನು ಟ್ಯಾಗ್ ಮಾಡಿದ್ದರು. ಈ ಮೂಲಕ ಸರ್ಕಾರದ ಲಾಕ್‍ಡೌನ್ ನಿಯಮಗಳ ಕುರಿತು ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿತ್ತು. ಅಲ್ಲದೆ ಲಾಕ್‍ಡೌನ್ ನಿಯಮಗಳ ಕುರಿತ ಚರ್ಚೆಗಳಿಗಿಂತ ಹೆಚ್ಚಾಗಿ ರಾಧಿಕಾ ಪ್ರಗ್ನೆಂಟ್ ಆಗಿರುವ ಸಿಗ್ನಲ್ ನೀಡಿದ್ದಾರೆ ಎಂದು ಟ್ರೋಲ್ ಆಗುತ್ತಿದೆ. ಹೀಗಾಗಿ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *