ಎಸ್ಮಾ ಜಾರಿ ಮಾಡೋ ಸನ್ನಿವೇಶ ಸೃಷ್ಟಿಯಾಗಿಲ್ಲ: ಕೋಡಿಹಳ್ಳಿ ಚಂದ್ರಶೇಖರ್

Public TV
2 Min Read

– ನಾಳೆಯೂ ಮುಷ್ಕರ ಮುಂದುವರಿಯುತ್ತೆ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಶಾಂತಿ ಮತ್ತು ಶಿಸ್ತಿನಿಂದ ನಡೆದಿದೆ. ಯಾರೂ ಸಹ ಕೊರೊನಾ ನಿಯಮಗಳನ್ನ ಉಲ್ಲಂಘನೆ ಮಾಡಿಲ್ಲ. ಮೊದಲೇ ಗಮನಕ್ಕೆ ತಂದು ಪ್ರತಿಭಟನೆ ನಡೆಸಲಾಗುತ್ತಿದ್ದು, ಎಸ್ಮಾ ಜಾರಿ ಮಾಡುವ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಾಳೆ ಸಹ ಮುಷ್ಕರ ಮುಂದುವರಿಯಲಿದೆ. ಏಪ್ರಿಲ್ 10 ರಂದು ಬೆಳಗಾವಿ ಮತ್ತು ಏಪ್ರಿಲ್ 11ರಂದು ಬೀದರ್ ನಲ್ಲಿ ಸಭೆ ಮಾಡುತ್ತೇವೆ. ನೆರೆಯ ಆಂಧ್ರಪ್ರದೇಶದಲ್ಲಿ ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರು ಎಂದು ಘೋಷಣೆ ಮಾಡಿದೆ. ಕಳೆದ ಮೂರು ತಿಂಗಳ ಹಿಂದೆಯೇ ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆರನೇ ವೇತನ ಆಯೋಗ ಜಾರಿ ಮಾಡ್ತಿವಿ ಎಂದು ಲಿಖಿತ ರೂಪದಲ್ಲಿ ಹೇಳಿದ್ದರು. ಈಗ ಕೊರೋನಾ ಕಷ್ಟ ಕಾಲ ಅಂತಾ ನೆಪ ಹೇಳ್ತಿದ್ದಾರೆ. ಆರ್ಥಿಕ ನಷ್ಟ ಅನ್ನೋದಾದ್ರೆ ಮಠ ಮಂದಿರಗಳಿಗೆ ಐನೂರು ಕೋಟಿ, ಸಾವಿರ ಕೋಟಿ ಅನುದಾನ ನೀಡಿದ್ದು ಹೇಗೆ ಎಂದು ಸರ್ಕಾರವನ್ನು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.

ಸರ್ಕಾರ ಉದ್ದೇಶ ಪೂರ್ವಕವಾಗಿ ಈ ಯೋಜನೆಯನ್ನು ಕೈಗೆ ತೆಗೆದುಕೊಳ್ಳುತ್ತಿಲ್ಲ. ನಲವತ್ತು ವರ್ಷದಿಂದ ಸರ್ಕಾರ ಶೋಷಣೆ ಮಾಡುತ್ತಿದೆ. ತಕ್ಷಣವೇ ತಪ್ಪುನ್ನು ಸರಿ ಮಾಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡರು. ನೀವು ಯಾವತ್ತೆ ಕರೆದ್ರೂ ನಿಮ್ಮ ಬಳಿ ಬರಲು ನಾವು ಸಿದ್ಧ. ಆರನೇ ವೇತನ ಆಯೋಗ ನಮಗೆ ಮುಖ್ಯ. ಸಾರಿಗೆ ಸಚಿವರು ಸ್ವಲ್ಪ ಕಸರತ್ತು ಮಾಡಿದ್ರೆ ಸಮಸ್ಯೆಗೆ ಸ್ಪಂದಿಸಬೇಕು. ಎಸ್ಮಾ ಜಾರಿ ಮಾಡುವ ಮುನ್ನ ನಿರ್ದಿಷ್ಟ ಕಾರಣ ನೀಡಿ ಎಂದರು.

ನಮ್ಮ ಪ್ರತಿಭಟನೆಗೆ ಸ್ಪಂದಿಸುವಂತೆ ಖಾಸಗಿ ವಾಹನ ಮಾಲೀಕರಿಗೂ ಮನವಿ ಮಾಡಿಕೊಂಡಿದ್ದೇವೆ. ಸ್ಪಂದಿಸೊದು ಅವರ ವಿವೇಚನೆಗೆ ಬಿಟ್ಟಿದ್ದು. ಸರ್ಕಾರ ನಮಗೆ ಕೊಟ್ಟಿರೋ ಮಾತು ಈಡೇರಿಸೋ ತನಕ ನಮ್ಮ ಮುಷ್ಕರ ಕೈಬಿಡೋದಿಲ್ಲ. ಇದುವರೆಗೂ ಸರ್ಕಾರದಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ. ಒಂದು ವೇಳೆ ಕರೆದ್ರೆ ಖಂಡಿತ ಹೋಗಿ ಮಾತಾಡುತ್ತೇವೆ. ನೋ ಪೇ, ನೋ ವರ್ಕ್ ಅನ್ನೋದು ಸರಿ ಇದೆ. ಆದ್ರೆ ಮಾರ್ಚ್ ತಿಂಗಳ ಸಂಬಳ ನೀಡಲ್ಲ ಅಂತ ಹೇಳುವುದು ತಪ್ಪು. ಸಂಬಳ ನೀಡಿಲ್ಲ ಅಂದ್ರೆ ನ್ಯಾಯಾಲಯ ಇದೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಏನಿದು ಎಸ್ಮಾ? ಸರ್ಕಾರಿ ನೌಕರರಿಗೆ ಭಯ ಯಾಕೆ?

Share This Article
Leave a Comment

Leave a Reply

Your email address will not be published. Required fields are marked *