ಊಟ ಮುಗಿಸಿ ಮಲಗಲು ಹೋದವ ನೇಣಿಗೆ ಶರಣು

Public TV
1 Min Read

– ನನ್ನ ಸಾವಿಗೆ ಚಿಕ್ಕಪ್ಪ, ಚಿಕ್ಕಮ್ಮನೇ ಕಾರಣ

ಕೋಲಾರ: ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಂದ ನನಗೆ ಅನ್ಯಾಯವಾಗಿದೆ. ನನ್ನ ಸಾವಿಗೆ ಇವರೇ ಕಾರಣ ಎಂದು ಆಡಿಯೋ, ಡೆತ್‍ನೋಟ್ ಬರೆದಿಟ್ಟು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾತ್ರಿ ಊಟ ಮುಗಿಸಿಕೊಂಡು ಮಲಗಲೆಂದು ಹೋದವನು ನೇಣಿಗೆ ಶರಣಾಗಿದ್ದಾನೆ. ಅಲ್ಲದೆ ತನ್ನ ಸಾವಿಗೆ ಚಿಕ್ಕಪ್ಪನಾದ ರಮೇಶ್ ಹಾಗೂ ಚಿಕ್ಕಮ್ಮಳಾದ ಅಶ್ವಥಮ್ಮ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟಿದ್ದಾನೆ. ಜೊತೆಗೆ ವಾಯ್ಸ್ ರೆಕಾರ್ಡ್ ಮಾಡಿ ವಾಟ್ಸಪ್ ಮೂಲಕ ತನ್ನ ಸ್ನೇಹಿತರಿಗೆ ಮೆಸೇಜ್ ಕಳುಹಿಸಿದ್ದಾನೆ. ನಂತರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಂಜುನಾಥ್ ಚಿಕ್ಕಂದಿನಲ್ಲಿಯೇ ತನ್ನ ತಂದೆ ತಾಯಿಯನ್ನ ಕಳೆದುಕೊಂಡು, ತನ್ನ ಚಿಕ್ಕಪ್ಪ ರಮೇಶ್ ಹಾಗೂ ಸಹೋದರಿಯರ ಆಶ್ರಯದಲ್ಲಿ ಬೆಳೆದಿದ್ದ. ಎಸ್‍ಎಸ್‍ಎಲ್‍ಸಿ ನಂತರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಸಹೋದರಿಯರಿಗೆ ನೆರವಾಗುವುದರೊಂದಿಗೆ ತನ್ನ ಚಿಕ್ಕಪ್ಪ ರಮೇಶ್ ಸಹಾಯದಿಂದ ಜಮೀನನ್ನ ಮಾರಿ ಅಕ್ಕಂದಿರ ಮದುವೆ ಸಹ ಮಾಡಿದ್ದನು. ಸ್ವಂತ ಹೋಟೆಲ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ.

ಬೆಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿದ್ದ ಈತ ಕೊರೊನಾ ಲಾಕ್‍ಡೌನ್‍ನಿಂದಾಗಿ ಗ್ರಾಮಕ್ಕೆ ಬಂದಿದ್ದನು. ತಮಗಿರುವ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ತನಗೆ ಆಸ್ತಿ ಎಷ್ಟಿದೆ ಎಂದು ಸರ್ವೇ ಮಾಡಿಸಲು ಮುಂದಾದಾಗ ತನ್ನ ಚಿಕ್ಕಪ್ಪನಿಂದ ತನಗೆ ಬರಬೇಕಿದ್ದ ಆಸ್ತಿಯಲ್ಲಿ ಮೋಸ ಆಗಿದೆ ಎಂದು ಗೊತ್ತಾಗಿದೆ. ಅಲ್ಲದೆ ಜಮೀನು ಹಂಚಿಕೆಯಲ್ಲಿ ತನ್ನ ಚಿಕ್ಕಪ್ಪ ರಮೇಶ್ ಹಾಗೂ ಚಿಕ್ಕಮ್ಮ ಅಶ್ವಥಮ್ಮ ಕಡಿಮೆ ನೀಡಿ ಮೋಸ ಮಾಡಿದ್ದಾರೆಂದು ತಿಳಿದುಕೊಂಡಿದ್ದಾನೆ. ಆಗಾಗ ಇದೇ ವಿಚಾರಕ್ಕೆ ಚಿಕ್ಕಪ್ಪನ ಜೊತೆ ಜಗಳವಾಡುವುದರೊಂದಿಗೆ ಸಾಕಷ್ಟು ಮನನೊಂದಿದ್ದ ಎನ್ನಲಾಗಿದೆ.

ಮಂಜುನಾಥ್ ಈ ಕುರಿತು ನಮ್ಮ ಜೊತೆ ನೋವನ್ನ ಹಂಚಿಕೊಂಡಿದ್ದನು. ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಪ್ಪನನ್ನೇ ನಂಬಿದ್ದ. ಇದೀಗ ತಾನು ನಂಬಿಕೆ ಇಟ್ಟಿದ್ದ ಚಿಕ್ಕಪ್ಪನಿಂದಲೇ ಮೋಸವಾಗಿದೆ ಎಂದು ಮನನೊಂದ ಮಂಜುನಾಥ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸ್ನೇಹಿತರು ಒತ್ತಾಯಿಸಿದ್ದಾರೆ.

ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *