ಉಲ್ಟಾ ಹೊಡೆದ ಅಖಿಲೇಶ್ ಯಾದವ್- ಕೊರೊನಾ ಲಸಿಕೆಗೆ ಸ್ವಾಗತ

Public TV
1 Min Read

– ಬಿಜೆಪಿ ಕಾರ್ಯಕರ್ತರು, ನಾಯಕರು ಮೊದಲು ಲಸಿಕೆ ಪಡೆಯಲಿ

ಲಕ್ನೋ: ಕೊರೊನಾ ಲಸಿಕೆ ಮೇಲೆ ನಂಬಿಕೆ ಇಲ್ಲ, ನಾನು ಹಾಕಿಸಿಕೊಳ್ಳಲ್ಲ ಎಂದಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇದೀಗ ಉಲ್ಟಾ ಹೊಡೆದಿದ್ದಾರೆ. ಕೊರೊನಾ ಲಸಿಕೆ ಹಂಚಿಕೆಯನ್ನು ಸ್ವಾಗತಿಸಿದ್ದಾರೆ.

ಈ ಕುರಿತು ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾತನಾಡಿರುವ ಅವರು, ಕೊರೊನಾ ಲಸಿಕೆ ವಿತರಣೆಯನ್ನು ಸ್ವಾಗತಿಸುತ್ತೇನೆ. ಆದರೆ ನಮಗೆ ಚಿಂತೆ ಇರುವುದು ಕೊರೊನಾ ಲಸಿಕೆಯಲ್ಲೇ ಹೊರತು ವೈದ್ಯರು ಹಾಗೂ ವಿಜ್ಞಾನಿಗಳ ಮೇಲಲ್ಲ. ಯಾವುದೇ ಘಟನೆಯನ್ನು ದೊಡ್ಡದಾಗಿಸುವುದರಲ್ಲಿ ಬಿಜೆಪಿಯವರು ಪರಿಣಿತಿ ಹೊಂದಿದ್ದಾರೆ. ಹೀಗಾಗಿ ಬಿಜೆಪಿಯ ಕಾರ್ಯಕರ್ತರು ಹಾಗೂ ನಾಯಕರು ಮೊದಲು ಲಸಿಕೆ ಪಡೆಯಲಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಒಂದು ವರ್ಷದ ಬಳಿಕ ಸಮಾಜವಾದಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗ ನಾವು ರಾಜ್ಯದ ಎಲ್ಲ ಜನತೆಗೆ ಉಚಿತ ಲಸಿಕೆ ನೀಡುತ್ತೇವೆ. ಆದರೆ ಎಲ್ಲರಿಗೂ ಕೊರೊನಾ ಲಸಿಕೆ ಸಿಗುವಂತಾಗಲು ಇನ್ನೂ ಎಷ್ಟು ಸಮಯ ಬೇಕು. ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ವ್ಯಾಕ್ಸಿನೇಶನ್ ಸೆಂಟರ್‍ಗಳಿಗೆ ಸರಿಯಾಗಿ ಹಣ ನೀಡಲಾಗಿದೆಯೇ ಎಂದು ನಾನು ಕೇಳಲು ಬಯಸುತ್ತೇನೆ. ಹಣವಿಲ್ಲದಿದ್ದರೆ ಕೆಲಸ ಮಾಡಲು ಹೇಗೆ ಸಾಧ್ಯ? ಲಸಿಕೆ ಸಂಗ್ರಹಣೆ ಹಾಗೂ ಸಾಗಣೆಗೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆಯೇ ಎಂಬುದನ್ನು ತಿಳಿಯಬೇಕಿದೆ. ನಮ್ಮ ವೈದ್ಯರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆದರೆ ಸರ್ಕಾರದ ಮೇಲಿಲ್ಲ ಎಂದು ಅವರು ಹರಿಹಾಯ್ದಿದ್ದಾರೆ.

ಈ ಹಿಂದೆ ಮಾತನಾಡಿದ್ದ ಅಖಿಲೇಶ್ ಯಾದವ್, ನಾನು ಸದ್ಯಕ್ಕೆ ಲಸಿಕೆ ಹಾಕಲು ಹೋಗುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದಾರೆ. ನಮ್ಮ ಸರ್ಕಾರ ರಚನೆಯಾದಾಗ ಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *