ಉಡುಪಿ ಪುತ್ತಿಗೆ ಶ್ರೀಗಳಿಗೆ ಕೊರೊನಾ- ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ

Public TV
1 Min Read

ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಪುತ್ತಿಗೆ ಮಠಾಧೀಶರಿಗೆ ಕೊರೊನಾ ಪಾಸಿಟಿವ್ ಆವರಿಸಿದೆ. ಉಡುಪಿಯ ಪುತ್ತಿಗೆ ಮಠದಲ್ಲಿದ್ದ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಕೊರೊನಾದ ಲಕ್ಷಣ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮಣಿಪಾಲ ಕೆಎಂಸಿಗೆ ಭೇಟಿ ಕೊಟ್ಟಿದ್ದರು.

ಈ ಸಂದರ್ಭ ಕೋವಿಡ್ 19 ಟೆಸ್ಟಿಂಗ್ ವೇಳೆ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪುತ್ತಿಗೆ ಮಠದ ಆಪ್ತರು ಮಾಹಿತಿ ಕೊಟ್ಟಿದ್ದಾರೆ. ಸದ್ಯ ಸುಗುಣೇಂದ್ರತೀರ್ಥ ಶ್ರೀಪಾದರಿಗೆ ರೋಗದ ಯಾವುದೇ ಲಕ್ಷಣಗಳು ಇಲ್ಲ ಸ್ವಾಮೀಜಿ ಸಂಪೂರ್ಣ ಆರೋಗ್ಯವಾಗಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ ಎಂದರು. ಉಡುಪಿ ಮೂಲ ಮಠದಲ್ಲಿದ್ದ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತಾಚರಣೆಗೆ ಸಿದ್ಧತೆಗಳನ್ನು ನಡೆಸಿದ್ದರು. ಮಠದಲ್ಲಿ ನಡೆಯುವ ದೈನಂದಿನ ಓಡಾಟ, ಧಾರ್ಮಿಕ ಚಟುವಟಿಕೆ, ಪೂಜೆ ಪುನಸ್ಕಾರದ ಸಂದರ್ಭ ಶ್ರೀಗಳಿಗೆ ಕೊರೊನಾ ಆವರಿಸಿರಬಹುದು ಎನ್ನಲಾಗಿದೆ.

ಸ್ವಾಮೀಜಿಯ ಜೊತೆಗಿದ್ದವರನ್ನು, ಆಪ್ತರನ್ನು ಕ್ವಾರಂಟೈನ್ ಮಾಡಲು ಉಡುಪಿ ಜಿಲ್ಲಾ ವೈದ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *