ಉಡುಪಿಯಲ್ಲಿ ಇಲ್ಲ ಬಂದ್ ಬಿಸಿ – ಎರಡನೇ ದಿನವೂ ಓಡಾಡ್ತಿದೆ ಸರ್ಕಾರಿ ಬಸ್

Public TV
2 Min Read

ಉಡುಪಿ: ರಾಜ್ಯಾದ್ಯಂತ ಕೆಎಸ್‍ಆರ್‍ಟಿಸಿ ನೌಕರರ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಬಂದ್‍ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿದು ಓಡಾಟ ನಡೆಸಿವೆ.

ರಾಜ್ಯಾದ್ಯಂತ ಸರ್ಕಾರಿ ಬಸ್ ಬಂದ್ ಆದ್ರೂ ಉಡುಪಿ ಜಿಲ್ಲೆಗೆ ಬಂದ್ ಬಿಸಿ ಅಷ್ಟಾಗಿ ತಟ್ಟಿಲ್ಲ. ಸರ್ಕಾರಿ ಚಾಲಕರು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಡಿಪೋದಿಂದ ಬಸ್ಸುಗಳು ಬರುತ್ತಿದ್ದು, ಹೊರಜಿಲ್ಲೆ, ಪಕ್ಕದ ಜಿಲ್ಲೆ ಮತ್ತು ಜಿಲ್ಲೆಯ ಎಲ್ಲಾ ತಾಲೂಕಿಗೆ ಬಸ್ ಓಡಾಡುತ್ತಿದೆ. ನಿನ್ನೆ ಕೂಡಾ ಬಸ್ ಓಡಾಟ ನಡೆಸಿದ್ದು, ಎರಡೂ ದಿನ ನೌಕರರು ಬಂದ್ ಮಾಡಿಲ್ಲ, ಪ್ರತಿಭಟನೆ ನಡೆಸಿಲ್ಲ.

ರಾಜಧಾನಿ ಬೆಂಗಳೂರು, ಹೊರ ಜಿಲ್ಲೆಯಿಂದ ಬರೋ ಬಸ್ಸುಗಳು ಇವತ್ತು ಜಿಲ್ಲೆಗೆ ಬಂದಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ 300 ಬಸ್ಸುಗಳು ಓಡಾಟ ನಡೆಸುತ್ತ್ತಿವೆ. ಇಂದು 10 ಗಂಟೆಯ ನಂತ್ರ ಉತ್ತರ ಕರ್ನಾಟಕದ ಕಡೆ ಸಂಚರಿಸುವ ಬಸ್ ಸಂಚಾರ ಸ್ಥಗಿತಗೊಂಡಿದೆ. ಸದ್ಯ ಸರಿ ಸುಮಾರು 30 ರಿಂದ 40 ಬಸ್ಸುಗಳು ಜಿಲ್ಲೆಯಲ್ಲಿ ಹಾಗೂ ಪಕ್ಕದ ಜಿಲ್ಲೆಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗೆ ಓಡಾಡುತ್ತಿವೆ.

ಉಡುಪಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ರಾಮು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಿಂದ ಬಸ್ಸುಗಳು ಇವತ್ತು ಉಡುಪಿಗೆ ಬಂದಿಲ್ಲ. ಉಡುಪಿಯಿಂದ ಹೋಗುವ ಮೈಸೂರು ಬೆಂಗಳೂರು ಬಸ್ಸು ಹೋಗಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಕಾರ್ಕಳ, ಪೆರ್ಡೂರು, ಕುಂದಾಪುರಕ್ಕೆ ಬಸ್ಸುಗಳು ಓಡಾಡುತ್ತವೆ. ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಸ್ ಬಂದಿರುವ ಕಾರಣ, ಎಲ್ಲಾ ಬಸ್ಸುಗಳು ಓಡಾಡುತ್ತವೆ ಎಂದರು.

ಉಡುಪಿ ನಗರದ ಒಳಗೆ ಮತ್ತು ಹೊರಗೆ ಓಡಾಡುವ ನರ್ಮ್ ಬಸ್ಸುಗಳು ಕೂಡ ಇದೆ. ಹೊರ ಜಿಲ್ಲೆಗಳಿಂದ ಯಾವುದೇ ಬಸ್ಸುಗಳು ಜಿಲ್ಲೆಗೆ ಪ್ರವೇಶ ಮಾಡುತ್ತಿಲ್ಲ. ಜೊತೆಗೆ ಪ್ರತಿಭಟನೆ ಕಾವು ಹೆಚ್ಚು ಇರುವ ಜಿಲ್ಲೆಗೆ ಬಸ್ ಸಂಚಾರ ಸ್ಥಗಿತ ಗೊಂಡಿದೆ. ಉಡುಪಿಯಲ್ಲಿ ಖಾಸಗಿ ಬಸ್‍ಗಳೇ ಹೆಚ್ಚಾಗಿರುವ ಕಾರಣ, ನಿತ್ಯ ಉದ್ಯೋಗಕ್ಕೆ ತೆರಳುವ ಪ್ರಯಾಣಿಕರು ಖಾಸಗಿ ಬಸ್ಸನ್ನು ನೆಚ್ಚಿಕೊಂಡಿದ್ದಾರೆ.

ಸದ್ಯ ಜಿಲ್ಲೆಯ ಜನ ಪರದಾಡುವ ಸ್ಥಿತಿ ಎದುರಾಗಿಲ್ಲ. ಆದ್ರೆ ದೂರದ ಜಿಲ್ಲೆಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ. ಕರಾವಳಿ ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳೇ ಪಾರಮ್ಯ ಮೆರೆದಿರುವಾಗ ಸರ್ಕಾರಿ ಬಸ್ಸುಗಳು ಬಂದ್ ಆದ್ರೂ ಜನರ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *