ಈ ವಾರ ಬಿಎಸ್‍ವೈ ಸಂಪುಟ ಸರ್ಜರಿ ಸಾಧ್ಯತೆ – ಹಾಲಿ ಮೂವರು ಸಚಿವರಿಗೆ ಕೊಕ್?

Public TV
1 Min Read

– ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಸಿಟ್ಟು

ಬೆಂಗಳೂರು: ಇಂದು ಬಿಹಾರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹೀಗಾಗಿ ಸಂಪುಟ ಸರ್ಜರಿ ವಿಚಾರವಾಗಿ ಚರ್ಚೆ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ರೆ ಬುಧವಾರವೇ ದೆಹಲಿಗೆ ಹಾರಲು ಸಿಎಂ ಯಡಿಯೂರಪ್ಪ ರೆಡಿ ಆಗಿದ್ದಾರೆ. ಸಿಎಂ ದೆಹಲಿಗೆ ತೆರಳುವ ಮುನ್ನ ಬುಧವಾರ ಸಂಪುಟ ಸಭೆ ಕರೆದಿದ್ದು, ಕೆಲವರ ಪಾಲಿಗೆ ಅದೇ ಕೊನೆಯ ಕ್ಯಾಬಿನೆಟ್ ಸಭೆ ಆಗುವ ಸಾಧ್ಯತೆಗಳಿವೆ.

ಕ್ರಿಯಾಶೀಲರಲ್ಲದ ಕೆಲ ಸಚಿವರನ್ನು ಸಂಪುಟದಿಂದ ಕೈಬಿಡಲು ಸಿಎಂ ಪ್ಲಾನ್ ಮಾಡ್ಕೊಂಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಸಂಪುಟ ಲಾಬಿ ಜೋರಾಗಿದೆ. ಸಚಿವ ಸ್ಥಾನ ಪಡೆದೇ ತೀರಬೇಕೆಂದು ಪ್ರಯತ್ನ ನಡೆಸುತ್ತಿರುವ ಎಂಎಲ್‍ಸಿ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್‍ಗೆ ಮಿತ್ರಮಂಡಳಿ ಸದಸ್ಯ, ಸಚಿವ ಎಸ್‍ಟಿ ಸೋಮಶೇಖರ್ ಬಿಗ್ ಶಾಕ್ ನೀಡಿದ್ದಾರೆ.

ಎಂಟಿಬಿ ಹಾಗೂ ವಿಶ್ವನಾಥ್‍ಗೆ ಸಚಿವ ಸ್ಥಾನ ನೀಡಬೇಕೆಂಬ ಬಗ್ಗೆ ಚರ್ಚೆಯೇ ಆಗಿಲ್ಲ. ಇದಕ್ಕಾಗಿ ನಾವು ಪ್ರತ್ಯೇಕವಾಗಿ ಸಿಎಂ ಭೇಟಿ ಆಗುವ ಅಗತ್ಯವೂ ಇಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಬಾಂಬ್ ಸಿಡಿಸಿದ್ದಾರೆ. ಅತ್ತ ಮಂತ್ರಿಗಿರಿ ಮೇಲೆ ಟವೆಲ್ ಹಾಕುತ್ತಿರುವ ಶಾಸಕ ರೇಣುಕಾಚಾರ್ಯ, ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ ಮಾತ್ರ ಮಂತ್ರಿಗಿರಿ ನೀಡಬೇಕು. ಜನರಿಂದ ಆಯ್ಕೆಯಾದವರನ್ನು ಮಾತ್ರ ಮಂತ್ರಿ ಮಾಡಬೇಕು. ಸೋತವರಿಗೆ ಸಚಿವ ಸ್ಥಾನ ನೀಡಬಾರ್ದು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಯೋಗೇಶ್ವರ್ ಗೆ ಮಂತ್ರಿ ಸ್ಥಾನ ನೀಡಬಾರದು ಎಂಬ ವಾದ ಮಂಡಿಸಿದ್ದಾರೆ.

ಬ್ಯಾಂಡ್ ಬಾರಿಸಿ ತಮಟೆ ಹೊಡೆದು ಬಾಯಿ ಬಡ್ಕೊಂಡ್ರೆ ಸಚಿವ ಸ್ಥಾನ ಸಿಗಲ್ಲ. ಹಾದಿ ರಂಪ ಮಾಡೋದು ನನಗಿಷ್ಟವಿಲ್ಲ. ಆದ್ರೆ ರಾಜಕೀಯವಾಗಿ ಯಾರೂ ಸನ್ಯಾಸಿಗಳಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಈ ಮಧ್ಯೆ ಗೆಲುವಿಗೆ ಸಹಕರಿಸಿದ ಸಚಿವ ಸೋಮಣ್ಣರನ್ನು ಭೇಟಿಯಾದ ಆರ್.ಆರ್.ನಗರ ಶಾಸಕ ಮುನಿರತ್ನ ಧನ್ಯವಾದ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *