ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ, ಜನರ ದುಡ್ಡನ್ನು ಲೂಟಿ ಮಾಡ್ತಿದ್ದೀರಿ – ಸರ್ಕಾರದ ವಿರುದ್ಧ ಹೆಚ್‍ಡಿಕೆ ಗರಂ

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ, ಜನರ ದುಡ್ಡನ್ನು ಲೂಟಿ ಮಾಡ್ತಿದ್ದೀರಿ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗರಂ ಆಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ನಿರಾಶಾದಾಯಕ ಪ್ಯಾಕೇಜ್. ಹೂವಿನ ಬೆಳೆಗಾರರಿಗೆ ಘೋಷಣೆ ಮಾಡಿರೋ ಪ್ಯಾಕೇಜ್ ಕಳೆದ ವರ್ಷಕ್ಕಿಂತ ಕಡಿಮೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕೂಲಿ, ಬೀಜದ ಬೆಲೆ ಏರಿಕೆ ಆಗಿರೋವಾಗ ಈ ಸಹಾಯ ಏನೂ ಸಾಲೋದಿಲ್ಲ ಎಂದರು.

ಇದು ಅರೆ ಕಾಸಿನ ಮಜ್ಜಿಗೆಗೆ ಕೊಟ್ಟ ಪರಿಹಾರದಂತೆ ಇದೆ. ಹಣ್ಣು, ತರಕಾರಿ ಬೆಳೆಗಾರರ ಪ್ಯಾಕೇಜ್ ಕೂಡಾ ಸರಿಯಿಲ್ಲ. ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಈ ಹಣ ಸಾಕಾಗೊಲ್ಲ. ಕಾರ್ಮಿಕರು, ಚಮ್ಮಾರರು, ಕಮ್ಮಾರಿಗೆ ಕೊಟ್ಟ ಹಣ ಯಾವುದಕ್ಕೂ ಸಾಕಾಗೊಲ್ಲ. ಅಕ್ಕಿ ಕೊಡೋದ್ರಲ್ಲೂ ನಾಟಕ ಮಾಡಿದ್ದೀರಾ. 10 ಕೆಜಿ ಅಕ್ಕಿ ಕೂಡಾ ಸಾಕಾಗೊಲ್ಲ. ಇದು ರಾಜ್ಯ ಸರ್ಕಾರದ ನಾಟಕ. ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನ ಇಲ್ಲ ಎಂದು ಹೆಚ್‍ಡಿಕೆ ಜರಿದಿದ್ದಾರೆ.

ಜನರ ದುಡ್ಡನ್ನು ನೀವು ಲೂಟಿ ಮಾಡ್ತಿದ್ದೀರಾ. ಜನರ ಸಹಕಾರಕ್ಕೆ ಸರ್ಕಾರ ಬರಬೇಕು. ಲೂಟಿ ಮಾಡೋದನ್ನ ಸರ್ಕಾರ ನಿಲ್ಲಿಸಬೇಕು. ನಿಗಮ-ಮಂಡಳಿಗಳಿಗೆ ನೇಮಕ ಮಾಡಿರೋರನ್ನ ರದ್ದು ಮಾಡಿ. ಆ ಹಣವನ್ನ ಜನರಿಗಾಗಿ ಉಪಯೋಗ ಮಾಡಿ. ಶ್ರಮಿಕರಿಗೆ ಕನಿಷ್ಠ 10 ಸಾವಿರ ಸಹಕಾರ ಕೊಡಲೇಬೇಕು. ಇದು ಜನತೆಯ ದುಡ್ಡು, ಇದು ಧರ್ಮಕ್ಕೆ ಕೊಡುತ್ತಿರೋದಲ್ಲ. ಜನರ ದುಡ್ಡು ಜನರಿಗೆ ಕೊಡಿ ಎಂದು ಆಗ್ರಹಿಸಿದರು.

ಪ್ರತಿ ಕುಟುಂಬಕ್ಕೆ 10 ಸಾವಿರ ಕೊಡಿ. ಜನರ ಜೀವನದ ಚೆಲ್ಲಾಟ ಆಡಬೇಡಿ. ಇದು ಡಂಬಾಚಾರದ ಪ್ಯಾಕೇಜ್ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *