ಈಜಲು ಹೋದ ಇಬ್ಬರು ಯುವಕರು ನೀರು ಪಾಲು

Public TV
1 Min Read

ಮಂಡ್ಯ: ದೇವಸ್ಥಾನದ ಪೂಜೆಗೆ ಬಂದ ಇಬ್ಬರು ಯುವಕರು ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ನಾರ್ಥ್ ಬ್ಯಾಂಕ್ ಬಳಿಯ ವಿಸಿ ನಾಲೆಯಲ್ಲಿ ಜರುಗಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮಲ್ಲಿನಾಥಪುರ ಗ್ರಾಮದ ಬಸವೇಗೌಡ (26), ಜವರೇಗೌಡ (34) ಎಂಬವರು ಕೆಆರ್‍ಎಸ್ ಬಳಿ ಇರುವ ಕಾಳಮ್ಮನ ದೇವಸ್ಥಾನಕ್ಕೆ ಪೂಜೆಗೆಂದು ಬಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಪಕ್ಕದಲ್ಲಿ ಹರಿಯುತ್ತಿದ್ದ ವಿಸಿ ನಾಲೆಯಲ್ಲಿ ಈಜಲು ಹೋಗಿದ್ದಾರೆ.

ಈ ವೇಳೆ ವಿಸಿ ನಾಲೆಯಲ್ಲಿ 2500 ಕ್ಯೂಸೆಕ್ ನೀರು ಬಿಟ್ಟಿದ್ದ ಪರಿಣಾಮ ಬಸವೇಗೌಡ ಹಾಗೂ ಜವರೇಗೌಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಓರ್ವ ಯುವಕನ ಶವ ಪತ್ತೆಯಾಗಿದ್ದು, ಇನ್ನೋರ್ವ ಯುವಕನ ಶವವನ್ನು ಶೋಧ ಮಾಡಲಾಗುತ್ತಿದೆ. ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕೆಆರ್‍ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ.

Share This Article
Leave a Comment

Leave a Reply

Your email address will not be published. Required fields are marked *