ಇಫ್ತಾರ್ ಕೂಟ ಇಲ್ಲ, ನಮಾಜ್‍ಗೂ ಮುನ್ನ 5 ನಿಮಿಷ ಮಸೀದಿ ಓಪನ್- ರಂಜಾನ್‍ಗೆ ಸರ್ಕಾರದಿಂದ ಮಾರ್ಗಸೂಚಿ

Public TV
1 Min Read

ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಭೆ, ಸಮಾರಂಭಗಳು ಹಾಗೂ ಹಬ್ಬಗಳ ಆಚರಣೆಗೆ ಸರ್ಕಾರ ನಿಯಮಗಳನ್ನು ರೂಪಿಸಿದ್ದು, ಅದರಂತೆ ಇದೀಗ ರಂಜಾನ್ ಆಚರಣೆಗೂ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇಫ್ತಾರ್ ಕೂಟ ನಡೆಸುವಂತಿಲ್ಲ, ನಮಾಜ್‍ಗೂ ಮುನ್ನ 5 ನಿಮಿಷ ಮಸೀದಿ ತೆರೆಯುವುದು ಸೇರಿದಂತೆ ವಿವಿಧ ನಿರ್ಬಂಧಗಳನ್ನು ವಿಧಿಸಿದೆ.

ರಂಜಾನ್ ಮಾಸ ಆರಂಭ ಹಿನ್ನೆಲೆ ತಿಂಗಳಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕಂಟೈನ್ಮೆಂಟ್ ವಲಯದಲ್ಲಿರುವ ಮಸೀದಿಗಳು ಬಂದ್ ಮಾಡುವಂತೆ ಸೂಚಿಸಿದ್ದು, ಕಂಟೈನ್ಮೆಂಟ್ ವಲಯದ ಹೊರಗೆ ಇರುವ ಮಸೀದಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ.

ಇಫ್ತಾರ್ ಗಳನ್ನು ಮನೆಯಲ್ಲೇ ಮಾಡಿಕೊಳ್ಳಬೇಕು, ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸಿ ಮಸೀದಿಗಳಲ್ಲಿ ನಮಾಜ್ ಮಾಡಬಹುದಾಗಿದೆ. ಆದರೆ ಪ್ರಾರ್ಥನೆ ಕೂಗುವ ಐದು ನಿಮಿಷಗಳ ಮುನ್ನ ಮಸೀದಿ ತೆರೆಯಬೇಕು. ಅಲ್ಲದೆ ನಮಾಜ್ ಮಾಡಲು ಸ್ವಂತ ಚಾದರ್ ತರಬೇಕು, ವಝೂ ಮನೆಯಲ್ಲೇ ಮಾಡಿಕೊಂಡು ಬರಬೇಕು, ನಮಾಜ್ ವೇಳೆ ಕನಿಷ್ಟ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಎರಡು ಮೀಟರ್ ಅಂತರಕ್ಕೆ ಮಸೀದಿಗಳಲ್ಲಿ ಮಾರ್ಕಿಂಗ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅಗತ್ಯವಿದ್ದರೆ ಜುಮ್ಮಾ ನಮಾಜ್ ನ ಸಮಯದಲ್ಲಿ ಮೂರು ಪಾಳಿ ಮಾಡಿಕೊಳ್ಳಬಹುದಾಗಿದ್ದು, ಮಧ್ಯಾಹ್ನ 12.45 – 1.15, 1.30-2 ಮತ್ತು 2.30-3 ಗಂಟೆಯವರೆಗೆ ಒಟ್ಟು ಮೂರು ಪಾಳಿಯಲ್ಲಿ ಜುಮ್ಮಾ ನಮಾಜ್ ಮಾಡಲು ಅವಕಾಶ ನೀಡಲಾಗಿದೆ.

ಉಪವಾಸ ಬಿಡುವಾಗ ಸಹ ಮಸೀದಿಗೆ ಆಹಾರ ವಸ್ತು ತರಬಾರದು, ಉಪವಾಸವನ್ನು ಮನೆಯಲ್ಲಿಯೇ ಬಿಡಬೇಕು. ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಮಸೀದಿಗೆ ಬರುವಾಗ ಸರದಿ ಅನುಸಿರಿಸಬೇಕು, ಮಾಸ್ಕ್ ಕಡ್ಡಾಯ, ಪ್ರತಿ ಹೊತ್ತಿನ ನಮಾಜ್ ಬಳಿಕ ಸ್ಯಾನಿಟೈಸರ್ ಅಳವಡಿಕೆ ಕಡ್ಡಾಯವಾಗಿದೆ. ಅಲ್ಲದೆ 60 ವರ್ಷದ ಮೇಲ್ಪಟ್ಟವರು, ಮಕ್ಕಳು ಹಾಗೂ ಗರ್ಭಿಣಿಯರಿಗೆ ಮಸೀದಿಗೆ ಬರುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *