ಇನಿಯನೊಂದಿಗೆ ಪತ್ನಿ ಎಸ್ಕೇಪ್- ಒಂಟಿಯಾಗಿದ್ದ ಆಂಟಿಯ ಜೊತೆ ಜಂಟಿಯಾದ!

Public TV
2 Min Read

– ಅಕ್ರಮಕ್ಕೆ ಕತ್ತರಿ ಹಾಕಲು ಬಂದ ಅತ್ತೆಯನ್ನ ಚಾಕು ಇರಿದು ಕೊಂದ
– ಆಕೆಗೆ ಗಂಡ ಇಲ್ಲ, ಇವನಿಗೆ ಹೆಂಡ್ತಿ ಇರಲಿಲ್ಲ

ಚೆನ್ನೈ: ಚಿಕ್ಕಮ್ಮನ ಜೊತೆ ಅನೈತಿಕ ಸಂಬಂಧವನ್ನು ವಿರೋಧಿಸಿದಕ್ಕೆ ತಂದೆಯ ಸಹೋದರಿ (ಅತ್ತೆ)ಯನ್ನೆ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಗುಣಸುಂದರಿ ಮೃತ ಮಹಿಳೆ. ಗುಣಸುಂದರಿಯ ಹಿರಿಯ ಸಹೋದರನ ಮಗನಾದ ಆರೋಪಿ ಗಣೇಶನ್ (31) ಕೊಲೆ ಮಾಡಿ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಮೃತ ಗುಣಸುಂದರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಆರೋಪಿ ಗಣೇಶನ್ ಬಾಲಾಜಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಇತ್ತೀಚೆಗೆ ಆರೋಪಿ ಗಣೇಶನ್ ಮನೆಗೆ ಹೋಗಿದ್ದ ಗುಣಸುಂದರಿ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು.

ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಪ್ರಾಥಮಿಕ ವಿಚಾರಣೆಯಲ್ಲಿ ಗಣೇಶನ್ ತನ್ನ ಚಿಕ್ಕಮ್ಮ ದೀಪಾ (ಮೃತ ಗುಣಸುಂದರಿಯ ಕಿರಿಯ ಸಹೋದರನ ಪತ್ನಿ) ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇದನ್ನು ವಿರೋಧಿಸಿದ್ದರಿಂದ ಗುಣಸುಂದರಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಪೊಲೀಸ್ ತಂಡವು ಆರೋಪಿ ಗಣೇಶನ್‍ಗಾಗಿ ಶೋಧ ಕಾರ್ಯ ನಡೆಸಿ, ಬಂಧಿಸಿದ್ದಾರೆ. ಆರೋಪಿ ಗಣೇಶನ್ ಪತ್ನಿ ಮೂರು ವರ್ಷಗಳ ಹಿಂದೆಯೇ ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದಳು. ನಂತರ ಆರೋಪಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಏಕಾಂಗಿಯಾಗಿ ವಾಸಿಸುತ್ತಿದ್ದನು. ಇತ್ತ ಗುಣಸುಂದರಿಯ ಕಿರಿಯ ಸಹೋದರ ಲೋಗು ಆರು ತಿಂಗಳ ಹಿಂದೆ ಹೃದಯ ಕಾಯಿಲೆಯಿಂದ ಸಾವನ್ನಪ್ಪಿದ್ದನು. ಹೀಗಾಗಿ ಈತನ ಪತ್ನಿ ದೀಪಾ ಕೂಡ ಒಂಟಿಯಾಗಿದ್ದಳು. ಆರೋಪಿ ಗಣೇಶನ್ ಆಗಾಗ ದೀಪಾ ಮನೆಗೆ ಹೋಗುತ್ತಿದ್ದನು. ದಿನಕಳೆದಂತೆ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ನಿ ಓಡಿಹೋದ ನಂತರ ಮೃತ ಗುಣಸುಂದರಿಯೇ ಆತನನ್ನು ನೋಡಿಕೊಳ್ಳುತ್ತಿದ್ದಳು. ಆದರೆ ದೀಪಾ ಜೊತೆಗೆ ಸಂಬಂಧ ಹೊಂದಿದ್ದ ಬಗ್ಗೆ ಗುಣಸುಂದರಿಗೆ ಗೊತ್ತಾಗಿದೆ. ಇದರಿಂದ ಆಗಾಗ ಗುಣಸುಂದರಿ ಆತನೊಂದಿಗೆ ಜಗಳವಾಡುತ್ತಿದ್ದಳು.

ಒಂದು ದಿನ ಗುಣಸುಂದರಿ ಇಬ್ಬರನ್ನೂ ಮನವೊಲಿಸಲು ಗಣೇಶನ್ ಮನೆಗೆ ಹೋಗಿದ್ದಾಳೆ. ಅಲ್ಲಿ ಜಗಳ ನಡೆದಿದ್ದು, ಕೋಪದಿಂದ ಗುಣಸುಂದರಿ, ದೀಪಾಳ ಮೇಲೆ ಹಲ್ಲೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಗಣೇಶನ್ ಚಾಕುವಿನಿಂದ ಪದೇ ಪದೇ ಇರಿದು ಅತ್ತೆ ಗುಣಸುಂದರಿಯನ್ನು ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *