ಇದೇ ಮೊದಲ ಬಾರಿಗೆ ಚಾಮಾರ್ಡಿ ಘಾಟ್‍ನಲ್ಲಿ ಸೂಸೈಡ್?

Public TV
2 Min Read

– ಹೆಣ ಎಸೆಯುತ್ತಿದ್ದ ಜಾಗದಲ್ಲಿ ಶವ ಪತ್ತೆ
– ಕಾರಿನಲ್ಲೇ ಕುಳಿತು ವಿಷ ಕುಡಿದ ವ್ಯಕ್ತಿ?

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟನ್ನ ಕೊಲೆಗಡುಕರು ತಮ್ಮ ಸೇಫ್ ಪ್ಲೇಸ್ ಮಾಡಿಕೊಂಡಿದ್ದರು. ಎಲ್ಲೋ ಕೊಲೆ ಮಾಡಿ ತಂದು ಚಾರ್ಮಾಡಿ ಘಾಟ್‍ನ ಸಾವಿರಾರು ಅಡಿ ಆಳದ ದಟ್ಟಕಾನನದೊಳಗೆ ಎಸೆದು ಹೋಗಿ, ನಾವು ಸೇಫ್ ಎಂದು ಸುಮ್ಮನಾಗುತ್ತಿದ್ದರು. ಕೊನೆಗೆ ಸಿಕ್ಕಿ ಬೀಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‍ನಲ್ಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಮೂಲದ ವ್ಯಕ್ತಿಯೋರ್ವ ಮಲಯ ಮಾರುತದ ಬಳಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತನ ಕಾರಿನಲ್ಲಿ ಸಿಕ್ಕ ದಾಖಲೆಗಳ ಅನ್ವಯ 43 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ಕಾರಿನ ಪಕ್ಕ ಕೆಳಭಾಗದಲ್ಲಿ ತುಸು ದೂರ ವಿಷದ ಬಾಟಲಿ ಕೂಡ ಪತ್ತೆಯಾಗಿದೆ. ಆದರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದಿನ್ನು ಸಾಬೀತಾಗಿಲ್ಲ. ಪ್ರಾಥಮಿಕ ಹಂತವಾಗಿ ಪೊಲೀಸರಿಂದ ಸ್ಥಳ ಪರಿಶೀಲನೆ ನಡೆದಿದ್ದು, ಸದ್ಯಕ್ಕೆ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.

ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದರೆ ಆತನ ಬಾಯಲ್ಲಿ ನೊರೆ ಇರುತ್ತಿತ್ತು. ಆದರೆ ಈ ವ್ಯಕ್ತಿಯ ಬಾಯಲ್ಲಿ ನೊರೆ ಬಂದಿಲ್ಲ. ಅಷ್ಟೇ ಅಲ್ಲದೆ ಜುಲೈ 31ರಂದು ಬರೆದಿರೋ ಡೆತ್ ನೋಟ್ ಕೂಡ ಜೇಬಲ್ಲಿದೆ. ಮೊಬೈಲ್ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿದೆ. ಮೊಬೈಲ್‍ನಲ್ಲಿ 20 ಮಿಸ್ ಕಾಲ್ ಇದೆ. ಮೃತ ವ್ಯಕ್ತಿ ಕಾರಿನ ಎಡಬದಿಯಲ್ಲಿ ಕೂತಿದ್ದಾರೆ. ಕಾರಿನ ಡ್ರೈವರ್ ಸೀಟ್ ತುಂಬಾ ಮುಂದೆ ಬಂದಿದೆ. ಅಂದರೆ ತೆಳ್ಳಗಿನ ವ್ಯಕ್ತಿ ಕಾರನ್ನ ಡ್ರೈವ್ ಮಾಡಿರುವಂತೆ ಭಾಸವಾಗಿದೆ.

ಡೆತ್‍ನೋಟ್‍ನಲ್ಲೇನಿದೆ?
ಗಿರೀಶ್ ಎಂಬವನು ನನಗೆ 26 ಸಾವಿರ ಹಣ ಕೊಡಬೇಕು. ನನ್ನ ಬೈಕ್ ಅವನಿಗೆ ಕೊಟ್ಟಿದ್ದೇನೆ ಎಂದು ಬರೆದಿಟ್ಟಿದ್ದಾನೆ. ಜೊತೆಗೆ ನನ್ನ ಪತ್ನಿ ಲಕ್ಷ್ಮಿಯನ್ನ ಕಳೆದುಕೊಂಡ ಮೇಲೆ ನನಗೆ ಜೀವನವೇ ಬೇಡವಾಗಿದೆ. ನನ್ನ ಜೀವವೇ ಅವಳಾಗಿದ್ದಳು. ಅವಳನ್ನ ಬಿಟ್ಟರೆ ನನಗೆ ಜೀವವೇ ಇಲ್ಲ. ಅವಳ ದಾರಿಗೆ ನಾನು ಸಾಗುವೆ ಎಂದು ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕ್ಷಮೆ ಕೋರಿದ್ದಾರೆ. ಡೆತ್ ನೋಟ್ ಬರೆದಿಟ್ಟು ವಿಷ ಕುಡಿದು ಆತ್ಮಹತ್ಯೆ ಶರಣಾಗಿದ್ದರು ಕೂಡ ಸ್ಥಳದಲ್ಲಿನ ವಾತಾವರಣ ನೋಡಿದರೆ ಅನುಮಾನ ಮೂಡುವಂತಿದೆ. ಬಣಕಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *