ಇದು ಆತ್ಮಹತ್ಯೆಯಲ್ಲ- ಡಿವೈಎಸ್‍ಪಿ ಲಕ್ಷ್ಮಿ ಸಾವಿನ ಬಳಿಕ ಪತಿ ನವೀನ್ ಮೊದಲ ಪ್ರತಿಕ್ರಿಯೆ

Public TV
1 Min Read

– ಈ ವಿಚಾರವಾಗಿ ಹೇಳಲು ಮಾತೇ ಬರುತ್ತಿಲ್ಲ

ಕೋಲಾರ: ನನ್ನ ಪ್ರಕಾರ ಇದು ಆತ್ಮಹತ್ಯೆ ಅಲ್ಲ, ಈ ವಿಚಾರವಾಗಿ ಹೇಳಲು ಮಾತೇ ಬರುತ್ತಿಲ್ಲ ಎಂದು ಸಿಐಡಿ ಡಿವೈಎಸ್‍ಪಿ ಲಕ್ಷ್ಮಿ ಪತಿ ನವೀನ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲೆಯ ತೊರವಾಲಹಟ್ಟಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರದ ಬಳಿಕ ಮಾತನಾಡಿದ ಅವರು, ಈ ವಿಚಾರವಾಗಿ ಹೇಳಲು ಮಾತೇ ಬರುತ್ತಿಲ್ಲ. ಸಾಕಷ್ಟು ದುಃಖವಾಗುತ್ತಿದೆ. ಕಳೆದ ರಾತ್ರಿಯೂ ಲಕ್ಷ್ಮಿ ನನ್ನೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಳು. ಬೆಳಗ್ಗೆ ಮಾಹಿತಿ ತಿಳಿದು ಕೂಡಲೇ ಬಂದಿದ್ದೇನೆ. ತುಂಬಾ ಬೇಜಾರಾಗಿದೆ, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿರುವೆ ಎಂದು ಮಾಹಿತಿ ನೀಡಿದರು.

ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆ ಯಾವುದೂ ನಡೆದಿಲ್ಲ. ಸ್ವಲ್ಪ ಹಠ ಜಾಸ್ತಿ ಇತ್ತು. ಹೀಗಾಗಿ ಆಗಾಗ ಜಗಳವಾಗುತಿತ್ತು. ಪೊಲೀಸ್ ಇಲಾಖೆಯ ತನಿಖೆ ಮೇಲೆ ನಂಬಿಕೆ ಇದೆ. ಹೀಗಾಗಿ ಯಾವುದೇ ಹೆಚ್ಚುವರಿ ತನಿಖೆ ಬೇಕಾಗಿಲ್ಲ. ಇಂತಹ ಘಟನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇಬ್ಬರೂ ಫ್ಯಾಮಿಲಿ ಪ್ಲಾನಿಂಗ್ ನಲ್ಲಿ ಇದ್ದೆವು ಎಂದು ತಿಳಿಸಿದರು.

ಇಂದು ಲಕ್ಷ್ಮಿ ಅವರ ಸ್ವ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಪತಿ ನವೀನ್ ಅಂತಿಮ ವಿಧಿ ವಿಧಾನ ನೆರವೇರಿಸಿದರು. ಕೋಲಾರ ಪೊಲೀಸರು ಮೂರು ಸುತ್ತು ಕುಶಾಲು ತೋಪು ಸಿಡಿಸಿ ಗೌರವ ಸಲ್ಲಿಸಿದರು. ನೂರಾರು ಗ್ರಾಮಸ್ಥರು ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

ಕೋಲಾರ ಎಸ್‍ಪಿ ಕಾರ್ತಿಕ್ ರೆಡ್ಡಿ, ಎಎಸ್‍ಪಿ ಜಾಹ್ನವಿ ಸಹ ಅಂತಿಮ ದರ್ಶನ ಪಡೆದರು. ಬಳಿಕ ಪತಿ ನವೀನ್ ಹಾಗೂ ತಂದೆ ವೆಂಕಟೇಶಪ್ಪ ಅವರಿಗೆ ಸಮಾಧಾನಪಡಿಸಿದರು. ಜಿಲ್ಲೆಯ ಮಾಲೂರು ತಾಲೂಕಿನ ಸ್ವಗ್ರಾಮ ತುರುವಾಲಟ್ಟಿಯ ಹೊರವಲಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಲಕ್ಷ್ಮಿ ಸಂಬಂಧಿಕರು, ಗ್ರಾಮಸ್ಥರು, ಪೊಲೀಸ್ ಇಲಾಖೆ ಅಧಿಕಾರಿಗಳು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಗ್ರಾಮದ ನೂರಾರು ಜನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *