ಇತಿಹಾಸ ಪ್ರಸಿದ್ಧ ದೊಡ್ಡಗದ್ದವನಳ್ಳಿ ಲಕ್ಷ್ಮಿ ದೇವಾಲಯದ ವಿಗ್ರಹ ಭಗ್ನ

Public TV
1 Min Read

– ನಿಧಿ ಆಸೆಗೆ ವಿಗ್ರಹ ಧ್ವಂಸಗೊಳಿಸಿರುವ ಶಂಕೆ

ಹಾಸನ: ನಿಧಿ ಆಸೆಗಾಗಿ ಕಳ್ಳರು ವಿಶ್ವವಿಖ್ಯಾತ ದೊಡ್ಡಗದವನಹಳ್ಳಿ ಶ್ರೀಲಕ್ಷ್ಮಿ ದೇವಾಲಯದ ವಿಗ್ರಹವನ್ನೇ ಒಡೆದು ಹಾಕಿರುವ ಶಂಕೆ ವ್ಯಕ್ತವಾಗಿದೆ.

ಹಾಸನ ತಾಲೂಕಿನಲ್ಲಿರುವ ಸುಮಾರು 906 ವರ್ಷಗಳ ಇತಿಹಾಸ ಹೊಂದಿರುವ ದೊಡ್ಡಗದ್ದವನಳ್ಳಿ ಲಕ್ಷ್ಮಿ ದೇವಾಲಯದ ವಿಗ್ರಹವನ್ನು ಕಳ್ಳರು ಒಡೆದು ಹಾಕಿದ್ದಾರೆ. ಬೆಳಿಗ್ಗೆ ಅರ್ಚಕರು ದೇವಸ್ಥಾನದ ಬಾಗಿಲು ತೆಗೆದು ನೋಡಿದಾಗ ಒಡೆದುಹೋದ ಸ್ಥಿತಿಯಲ್ಲಿರುವ ಮಹಾಕಾಳಿ ವಿಗ್ರಹ ಪತ್ತೆಯಾಗಿದೆ.

ಕಳ್ಳರು ನಿಧಿಗಾಗಿ ವಿಗ್ರಹ ಒಡೆದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದು ಹೊಯ್ಸಳ ವಾಸ್ತುಶೈಲಿಯ ಅಪೂರ್ವ ಚತುಷ್ಕೂಟಾಚಲ ಶೈಲಿಯಲ್ಲಿರುವ ದೇವಾಲಯವಾಗಿದೆ. ದೇವಾಲಯಕ್ಕೆ ನುಗ್ಗಿ ವಿಗ್ರಹವನ್ನು ಧ್ವಂಸಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಸಿಟಿ ರವಿಯವರು, ಟ್ವಿಟ್ಟರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ದೇವಸ್ಥಾನದ ಬಾಗಿಲು ತೆಗೆದಾಗ ಮೂರ್ತಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಈ ದೇವಾಲಯವು ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅವರೊಂದಿಗೆ ಚರ್ಚೆ ಮಾಡಲಾಗಿದೆ. ವಿಗ್ರಹ ಒಡೆದು ಹೋಗಿರುವ ಬಗ್ಗೆ ದೃಢೀಕರಿಸಿದ್ದಾರೆ. ಕೂಡಲೇ ಎಫ್.ಐ.ಆರ್. ದಾಖಲಿಸಲು ಹೇಳಿದ್ದು, ತಹಶೀಲ್ದಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಗತ್ಯ ಕ್ರಮ ಜರುಗಿಸಲು ಸೂಚಿಸಿದ್ದೇವೆ. ಈ ದೇವಸ್ಥಾನದ ವಿಗ್ರಹ ಪುನರ್ ಸ್ಥಾಪನೆ ಮಾಡುವುದಕ್ಕೆ ಪುರಾತತ್ವ ಇಲಾಖೆ ಬೆಂಗಳೂರು ಕಚೇರಿಗೂ ಕೂಡ ತಿಳಿಸಲಾಗಿದೆ. ಅಗತ್ಯಕ್ರಮ ಏನೇನು ತೆಗೆದುಕೊಳ್ಳಬಹುದು ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *