ಇಂದು ಆಷಾಢ ಅಮಾವಾಸ್ಯೆ, ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ತಾಯಿಯ ದರ್ಶನಕ್ಕಿಲ್ಲ ಅವಕಾಶ

Public TV
1 Min Read

ಬೆಂಗಳೂರು: ಇಂದು ಆಷಾಢದ ಮೊದಲ ಶುಕ್ರವಾರ. ಆಷಾಢದ ಮೊದಲ ಅಮಾವಾಸ್ಯೆ ಕೂಡಾ ಹೌದು. ಎರಡೂವರೆ ತಿಂಗಳ ಬಳಿಕ ಇದೇ ಸೋಮವಾರದಿಂದ ದೇಗುಲಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಡಲಾಗಿದೆ.

ಅಷಾಢದ ಮೊದಲ ಶುಕ್ರವಾರ ಮತ್ತು ಅಮಾವಾಸ್ಯೆಯಲ್ಲಿ ಪೂಜೆ ಸಲ್ಲಿಸುವುದಕ್ಕೆ ಭಕ್ತರ ದಂಡೇ ಬರುತ್ತಿದೆ. ಆದರೆ ಮೈಸೂರಿನ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಇಲ್ಲ.ಕೇಂದ್ರ, ರಾಜ್ಯ ಸರ್ಕಾರದ ಶಿಷ್ಟಾಚಾರ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ, ಕರ್ತವ್ಯ ನಿರತ ಅಧಿಕಾರಿಗಳಿಗೆ ಮಾತ್ರ ಬೆಟ್ಟಕ್ಕೆ ಪ್ರವೇಶ ಅವಕಾಶವಿದೆ. ಆದರೆ ಭಕ್ತರು ಜಾಸ್ತಿ ಬರಬಹುದು ಎಂಬ ಕಾರಣಕ್ಕೆ ಇಂದು ಭಕ್ತರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದಂತೆ ರಾಜ್ಯದ ಉಳಿದ ದೇವಸ್ಥಾನಗಳಲ್ಲಿ ಭಕ್ತರು ಬೆಳಗ್ಗೆಯೇ ದೇವಸ್ಥಾನಗಳಿಗೆ ಬರುತ್ತಿದ್ದಾರೆ. ಬೆಂಗಳೂರಿನ ಬನಶಂಕರಿ ಮತ್ತು ಅಣ್ಣಮ ದೇವಸ್ಥಾನಗಳಲ್ಲಿ ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಕೇಸ್ – ಇಂದು ಬಾಂಬ್ ಸಿಡಿಸ್ತಾರಾ ಬಸವರಾಜ್ ಮುತ್ತಗಿ..?

ಬನಶಂಕರಿ ದೇವಾಲಯದಲ್ಲಿ ಬೆಳ್ಳಂಬೆಳಗ್ಗೆಯೇ ಬನಶಂಕರಿ ತಾಯಿಯ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ. ಲಾಕ್ ಡೌನ್ ಸಡಿಲಿಕೆಯ ಬಳಿಕ ಸರ್ಕಾರ ದೇವಾಲಯಕ್ಕೆ ಭಕ್ತರಿಗೆ ಅವಕಾಶ ನಿಡಿದ್ದು, ಆ ಹಿನ್ನಲೆಯಲ್ಲಿ ಹೆಚ್ಚಿನ ಭಕ್ತರು ಬನಶಂಕರಿಯ ದರ್ಶನಕ್ಕೆ ಬರುತ್ತಿದ್ದಾರೆ. ಸರ್ಕಾರ ನಿಯಮಗಳ ಪ್ರಕಾರ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಬನಶಂಕರಿ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪ ಹಚ್ಚುವುದು ಸಂಪ್ರದಾಯ. ಈ ಹಿಂದೆ ದೇವಾಲಯದ ಒಳಭಾಗದಲ್ಲಿ ನಿಂಬೆಹಣ್ಣಿನ ದೀಪ ಹಚ್ಚೋದಕ್ಕೆ ಅವಕಾಶವಿತ್ತು. ಸದ್ಯ ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಇದೆ. ಹೀಗಾಗಿ ದೇವಾಲಯದ ಹೊರ ಭಾಗದಲ್ಲೇ ನಿಂಬೆಹಣ್ಣಿನ ದೀಪ ಹಚ್ಚಿ ಜನ ದೇವರ ದರ್ಶನ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *