ಆ ಯಮ್ಮನ ಸಹವಾಸಕ್ಕೆ ಹೋಗೋದನ್ನೇ ಬಿಟ್ಟು ಬಿಟ್ಟಿದ್ದೇನೆ ಅಂದಿದ್ಯಾಕೆ ಲ್ಯಾಗ್ ಮಂಜು?

Public TV
2 Min Read

ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಒಂದು ವಾರ ಕಳೆದಿದೆ. ಶನಿವಾರ ಕಿಚ್ಚನ ಜೊತೆ ಮೊದಲ ವಾರದ ಪಂಚಾಯತಿ ನಡೆದಿದ್ದು, ಈ ವೇಳೆ ಸ್ಪರ್ಧಿಗಳ ಕುರಿತಂತೆ ಕೊಂಚ ಸಿರಿಯಸ್, ಸ್ವಲ್ಪ ಕಾಮಿಡಿ ವಿಚಾರಗಳ ಚರ್ಚೆಯಾಗಿದೆ. ಅದರಲ್ಲೂ ಲ್ಯಾಗ್ ಮಂಜು ವಾರದ ಕಥೆ ಕಿಚ್ಚನ ಜೊತೆ ಮೊದಲ ಸಂಚಿಕೆಯಲ್ಲಿ ಮನೆಯ ಎಲ್ಲಾ ಸದಸ್ಯರಿಗಿಂತಲೂ ಸೆಂಟರ್ ಆಫ್ ದಿ ಆ್ಯಟ್ರಕ್ಷನ್ ಆಗಿದ್ದರು.

ಈ ವೇಳೆ ಕಿಚ್ಚ ಮನೆಯಲ್ಲಿರುವ ಪ್ರತಿ ಸದಸ್ಯರ ಹೆಸರುಗಳನ್ನು ಹೇಳಿಕೊಂಡು ಹೋಗುತ್ತೇನೆ. ಅವರಲ್ಲಿರುವ ಒಳ್ಳೆಯ ಗುಣ ಹಾಗೂ ಈ ಒಂದು ವಿಚಾರದಲ್ಲಿ ಇವರೊಂದಿಗೆ ಎಚ್ಚರಿಕೆ ಇರಬೇಕು ಎಂದು ನಿಮಗೆ ಅನಿಸುವ ಕೆಲವು ವಿಚಾರಗಳನ್ನು ತಿಳಿಸುತ್ತಾ ಹೋಗುವಂತೆ ಲ್ಯಾಗ್ ಮಂಜುಗೆ ಸೂಚಿಸಿದ್ದಾರೆ.

ಅದರಂತೆ ಎಲ್ಲ ಸದಸ್ಯರ ವಿಚಾರವಾಗಿ ಅಭಿಪ್ರಾಯ ತಿಳಿಸುತ್ತಾ ಬಂದ ಲ್ಯಾಗ್ ಮಂಜು ವೈಷ್ಣವಿ ಗೌಡ ಸರದಿ ಬಂದಾಗ, ವೈಷ್ಣವಿ ಗೌಡರೊಂದಿಗೆ ಎಚ್ಚರಿಕೆಯಿಂದ ಇರಬೇಕಾದಂತಹ ವಿಚಾರವೇನಿಲ್ಲ. ಆದರೆ ಯೋಗ ಮಾಡುವಾಗ ಮಾತ್ರ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಬೆಳಗ್ಗೆ ಎದ್ದು ಹೊರಗಡೆ ಹೋದಾಗ ಬನ್ನಿ ನೀವು ಕೂಡ ಯೋಗ ಮಾಡಿ ಎಂದು ಕರೆಯುತ್ತಾರೆ. ನಾನು ಕೂಡ ಒಂದೇ ಒಂದು ಬಾರಿ ಟ್ರೈ ಮಾಡೋಣ ಎಂದು ಹೋಗಿದ್ದೆ. ಈ ವೇಳೆ ಇದು ಬಹಳ ಸಿಂಪಲ್ ಯೋಗಾಸನ ಎಂದು ಹಿಂದೆ ತಿರುಗಿ ಮುಂದೆ ನೋಡುವಷ್ಟರಲ್ಲಿ ಒಂದು ಕಾಲನ್ನು ಮೇಲಕ್ಕೆ ಎತ್ತಿ ಕೈನಲ್ಲಿ ಹಿಡಿದುಕೊಂಡರು. ಬಳಿಕ ಇದು ಕೇವಲ ಬೇಸಿಕ್ ಯೋಗಾಸನ ನಿಮಗೆ ಇಷ್ಟವಿದ್ದರೆ ಮಾತ್ರ ಮಾಡಿ ಎಂದು ಹೇಳುತ್ತಾರೆ. ಹಾಗಾಗಿ ಈ ಯೋಗದ ವಿಚಾರದಲ್ಲಿ ಮಾತ್ರ ಅವರೊಂದಿಗೆ ಬಹಳ ಹುಷಾರಾಗಿರಬೇಕು. ಅಂದಿನಿಂದ ಆ ಯಮ್ಮನ ಸಹವಾಸಕ್ಕೆ ಹೋಗುವುದನ್ನು ಬಿಟ್ಟುಬಿಟ್ಟಿದ್ದೇನೆ. ಯೋಗದ ವಿಚಾರಕ್ಕೆ ಹೋಗುತ್ತಿಲ್ಲ ಎಂದರು.

ಒಳ್ಳೆಯ ವಿಚಾರಕ್ಕೆ ಬಂದರೆ ವೈಷ್ಣವಿ ಸದಾ ನಗುತ್ತಾ ಇರುತ್ತಾರೆ. ಅದನ್ನು ನೋಡುವುದೇ ಒಂದು ರೀತಿಯ ಆನಂದ ಎಂದು ಹೇಳಿದರು. ಒಟ್ಟಾರೆ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಲಿಂದ ಲ್ಯಾಗ್ ಮಂಜು ಮನೆಯ ಎಲ್ಲಾ ಸದಸ್ಯರನ್ನು ನಗುವಿನ ಅಲೆಯಲ್ಲಿ ತೇಲಿಸುತ್ತಿದ್ದಾರೆ. ಇದೀಗ ಶನಿವಾರದ ಎಪಿಸೋಡ್‍ನಲ್ಲಿ ಕಿಚ್ಚ ಸುದೀಪ್ ಮುಖದಲ್ಲಿ ಕೂಡ ನಗು ಮೂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *