ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತ ಸೋಂಕಿತ

Public TV
1 Min Read

– ಸೋಂಕಿತನ ಪತ್ತೆಗೆ ಆಸ್ಪತ್ರೆ ಸಿಬ್ಬಂದಿ ಹರಸಾಹಸ

ಶಿವಮೊಗ್ಗ: ಸೋಂಕಿತ ವ್ಯಕ್ತಿ ನಗರದ ಎನ್.ಎಚ್.ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿ ಭತ್ತದ ಗದ್ದೆಯಲ್ಲಿ ಅವಿತು ಕುಳಿತಿದ್ದು, ಆಸ್ಪತ್ರೆ ಸಿಬ್ಬಂದಿ ಹರಸಾಹಸಪಟ್ಟು ಸೋಂಕಿತನನ್ನು ಹುಡುಕಿದ್ದಾರೆ.

ನಗರದ ಗಾಂಧಿ ಬಜಾರ್ ನಿವಾಸಿಯಾಗಿರುವ 48 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎನ್.ಎಚ್ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಆಸ್ಪತ್ರೆ ಸಿಬ್ಬಂದಿಗೆ ಯಾಮಾರಿಸಿ ನಾಪತ್ತೆಯಾಗಿ ಎದುರಿನಲ್ಲಿಯೇ ಇದ್ದ ಭತ್ತದ ಗದ್ದೆಯಲ್ಲಿ ಅವಿತು ಕುಳಿತಿದ್ದ.

ಆಸ್ಪತ್ರೆಯಿಂದ ಸೋಂಕಿತ ನಾಪತ್ತೆಯಾದ ಬಗ್ಗೆ ಗಮನಿಸಿದ ಸಿಬ್ಬಂದಿ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ನಂತರ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಸೋಂಕಿತ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎದುರಿನಲ್ಲಿದ್ದ ಭತ್ತದ ಗದ್ದೆ ಕಡೆಗೆ ತೆರಳಿರುವುದು ತಿಳಿದಿದೆ. ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಭತ್ತದ ಗದ್ದೆಯಲ್ಲಿ ಸೋಂಕಿತ ಅವಿತು ಕುಳಿತಿರುವುದು ಪತ್ತೆಯಾಗಿದೆ. ಪತ್ತೆಯಾದ ಸೋಂಕಿತನನ್ನು ಸಿಬ್ಬಂದಿ ಮತ್ತೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಸೋಂಕಿತನ ನಾಪತ್ತೆಯಿಂದ ಆತಂಕಕ್ಕೊಳಗಾಗಿದ್ದ ಆಸ್ಪತ್ರೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *