ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಇಂದು ಬೆಂಗಳೂರಿನಲ್ಲಿ ಮೂವರು ಬಲಿ

Public TV
1 Min Read

ಬೆಂಗಳೂರು: ಒಂದೆಡೆ ಮಹಾಮಾರಿ ಕೊರೊನಾದಿಂದ ಭಯಭೀತರಾದ್ರೆ ಇನ್ನೊಂದೆಡೆ ಇದೀಗ ಆಸ್ಪತ್ರೆಗಳ ಸಿಬ್ಬಂದಿಯ ನಿರ್ಲಕ್ಷ್ಯಕ್ಕೂ ಜನ ಭಯಬೀಳುವಂತಾಗಿದೆ.

ಹೌದು. ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಇಂದು ಒಂದೇ ದಿನ ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ಬೆಡ್‍ಗಳಿಲ್ಲದೇ ಆಸ್ಪತ್ರೆಗೆ ಅಲೆದಾಡಿಯೇ ಜನ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಕೋರಮಂಗಲ ನಿವಾಸಿ ನಿವೃತ್ತ ಸಬ್‍ಇನ್ಸ್ ಪೆಕ್ಟರ್ ಇಂದು ಕೊನೆಯುಸಿರೆಳೆದಿದ್ದಾರೆ. ಇವರು ಚಿಕಿತ್ಸೆಗಾಗಿ ಮೂರು-ನಾಲ್ಕು ಆಸ್ಪತ್ರೆ ಅಲೆದಾಡಿದ್ದರು.

ಇತ್ತ ಕಾಚರಕನಹಳ್ಳಿಯಲ್ಲಿ 88 ವರ್ಷದ ವೃದ್ಧ ಕೂಡ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿತ ವೃದ್ಧ ಮೂರು ದಿನಗಳಿಂದ ಜ್ವರದಿಂದ ನರಳುತ್ತಿದ್ದು, ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ಸಿಬ್ಬಂದಿ ವೃದ್ಧನನ್ನು ಅಲೆದಾಡಿಸಿದ್ದವು. ಕೊರೊನಾ ಟೆಸ್ಟ್ ಮಾಡಿಸಿಕೊಂಡು ಬನ್ನಿ, ಆಮೇಲೆ ನೋಡೋಣ ಎಂದು ಆಸ್ಪತ್ರೆಗಳು ಹೇಳಿದ್ದವು. ಹೀಗಾಗಿ ಚಿಕಿತ್ಸೆ ಸಿಗದೆ ವೃದ್ಧ ಕಂಗಾಲಾಗಿ ಮನೆಗೆ ಬಂದು ತೀವ್ರ ಅಸ್ವಸ್ಥರಾಗಿದ್ದರು. ನಿನ್ನೆ ಮನೆಯಲ್ಲೇ ಮೃತಪಟ್ಟಿದ್ದಾರೆ.

ಆನೇಕಲ್‍ನಲ್ಲಿ ಐಸಿಯು ಬೆಡ್ ಸಿಗದೆ ಮಹಿಳೆಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಹೊಸಕೋಟೆ ತಾಲೂಕಿನ ಸಮೇತನಹಳ್ಳಿ 45 ವರ್ಷದ ಮಹಿಳೆ ಕಳೆದ ಬುಧವಾರ ಮನೆಗೆ ಹೋಗುತ್ತಿದ್ದಾಗ ತಲೆ ತಿರುಗಿ ಬಿದ್ದಿದ್ದರು. ಹೀಗಾಗಿ ಕುಟುಂಬಸ್ಥರು ಸತತ 4 ಗಂಟೆಗಳ ಕಾಲ ಆಸ್ವತ್ರೆಗಳಿಗೆ ಅಲೆದಾಡಿದ್ರು ಚಿಕಿತ್ಸೆಗೆ ದಾಖಲಿಸಿಕೊಂಡಿರಲಿಲ್ಲ. ಖಾಸಗಿ ಆಸ್ವತ್ರೆಗಳಿಗೆ ಸುತ್ತಾಡಿ ಕೊನೆಗೆ ಸಿಲಿಕಾನ್ ಸಿಟಿ ಆಸ್ವತ್ರೆಗೆ ಮಹಿಳೆ ದಾಖಲಾಗಿದ್ದರು. ಈ ವೇಳೆ ಚಿಕಿತ್ಸೆ ನೀಡಿದ ವೈದ್ಯರು ಮೆದುಳಿಗೆ ಪೆಟ್ಟಾಗಿದ್ದು ಬೇರೆ ಆಸ್ವತ್ರೆಗೆ ಐಸಿಯು ಚಿಕಿತ್ಸೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.

ಸಾಂದರ್ಭಿಕ ಚಿತ್ರ

ಹೀಗಾಗಿ ಕುಟುಂಬಸ್ಥರು ಕಳೆದ ರಾತ್ರಿಯಿಂದ ಐಸಿಯು ಚಿಕಿತ್ಸೆಯ ಬೆಡ್‍ಗಾಗಿ ಎಲ್ಲಾ ಆಸ್ವತ್ರೆಗಳಿಗೆ ಕರೆ ಮಾಡಿದ್ದರು. ಈ ವೇಳೆ ಕೆಲ ಆಸ್ಪತ್ರೆ ಸಿಬ್ಬಂದಿ ಬೆಡ್ ಖಾಲಿಯಿಲ್ಲ ಅಂದ್ರೆ ಮತ್ತೆ ಕೆಲವಡೆ ಕೋವಿಡ್ ರಿಪೋರ್ಟ್ ಬಂದ್ರೆ ಮಾತ್ರ ಚಿಕಿತ್ಸೆ ಕೊಡೋದಾಗಿ ಹೇಳಿದ್ದರು. ಹೀಗಾಗಿ ಕಳೆದ ಎರಡು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆ ಇದು ಮುಂಜಾನೆ ಮೃತಪಟ್ಟಿದ್ದಾರೆ.

ಆಸ್ವತ್ರೆಗಳಲ್ಲಿ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಅಂತ ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *