ಆಸೀಸ್ ಪ್ರವಾಸದಿಂದ ರೋಹಿತ್ ಔಟ್- ಗೊಂದಲಕ್ಕೀಡು ಮಾಡಿದ ಬಿಸಿಸಿಐ ನಡೆ

Public TV
2 Min Read

ಮುಂಬೈ: ಆಸ್ಟ್ರೇಲಿಯಾ ಸರಣಿಗೆ ಸೋಮವಾರ ಬಿಸಿಸಿಐ ಪ್ರಕಟ್ಟಿಸಿದ್ದ ತಂಡದಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರಿಗೆ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವು ಅನುಮಾನಗಳು ಮೂಡಿದ್ದು, ರೋಹಿತ್ ಶರ್ಮಾ ಕೈಬಿಡಲು ಕಾರಣವೇನು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

ಐಪಿಎಲ್ 2020ರ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಆ ಬಳಿಕ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಫೀಲ್ಡಿಂಗ್ ನಡೆಸಿರಲಿಲ್ಲ. ಬಳಿಕ ಸೂಪರ್ ಓವರಿನಲ್ಲಿ ಪೋಲಾರ್ಡ್ ಅವರು ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಮುಂಬೈ ಸೋಲುಂಡಿತ್ತು.

ಪಂಜಾಬ್ ವಿರುದ್ಧದ ಬಳಿಕ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡ ವಿರುದ್ಧ ಆಡಿದ್ದ ಪಂದ್ಯಗಳಲ್ಲಿ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿದ್ದರು. ಸದ್ಯ ಬಿಸಿಸಿಐ ಪ್ರಕಟಿಸಿರುವ ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಟೂರ್ನಿಗೆ ಪ್ರಕಟಿಸಿರುವ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಗಾಯದ ತೀವ್ರತೆ ಮೇಲೆ ಅಭಿಮಾನಿಗಳಲ್ಲಿ ಸಂದೇಹ ವ್ಯಕ್ತವಾಗಿದೆ.

ಸದ್ಯ ಈ ಕುರಿತು ಪ್ರಶ್ನೆ ಮಾಡಿರುವ ಟೀಂ ಇಂಡಿಯಾ ದಿಗ್ಗಜ ಆಟಗಾರ, ಐಪಿಎಲ್ ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್, ಮುಂಬೈ ಇಂಡಿಯನ್ಸ್ ಹಾಗೂ ಟೀಂ ಇಂಡಿಯಾ ಆಯ್ಕೆ ಸಮಿತಿ ರೋಹಿತ್ ಶರ್ಮಾರ ಗಾಯದ ಕುರಿತು ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ ಭಾನುವಾರ ಮುಂಬೈ ಇಂಡಿಯನ್ಸ್ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಾ ಕಾಣಿಸಿಕೊಂಡಿದ್ದರು. ಆದರೆ ಅವರ ಯಾವ ತೀವ್ರತೆಯಲ್ಲಿ ಗಾಯವಾಗಿದೆ ಎಂಬುವುದು ನನಗೆ ಅರ್ಥವಾಗುತ್ತಿಲ್ಲ. ಒಂದೊಮ್ಮೆ ಗಾಯಗೊಂಡಿದ್ರು ಪ್ಯಾಡ್ಸ್ ಕಟ್ಟಿಕೊಂಡು ಹೇಗೆ ಅಭ್ಯಾಸ ನಡೆಸಲು ಸಾಧ್ಯ. ಒಂದೊಮ್ಮೆ ಇದನ್ನು ಚಿಕ್ಕಗಾಯ ಎಂದುಕೊಂಡರೆ, ಆಸ್ಟ್ರೇಲಿಯಾ ಟೂರ್ನಿಯಲ್ಲಿ ಟಿ20 ಮತ್ತು ಏಕದಿನ ಮಾದರಿ ಪಂದ್ಯಗಳಲ್ಲಿ ಕೈಬಿಟ್ಟು, ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಬಹುದಿತ್ತು. ಏಕೆಂದರೆ ಆತ ಚೇತರಿಸಿಕೊಂಡು ಮತ್ತೆ ಫಿಟ್ನೆಸ್ ಪಡೆಯಲು ಒಂದೂವರೆ ತಿಂಗಳ ಸಮಯ ಲಭಿಸುತ್ತಿತ್ತು. ಈಗಲಾದರೂ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾಗೆ ಆಗಿರುವ ಗಾಯದ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *