ಆಲೂಗೆಡ್ಡೆ, ಮಧ್ಯವರ್ತಿ, ಫ್ಯಾಕ್ಟರಿ ಬಗ್ಗೆ ಭಾಷಣ – ರಾಹುಲ್ ದ್ವಿಮುಖ ನೀತಿ ಪ್ರಶ್ನಿಸಿದ ನಡ್ಡಾ

Public TV
2 Min Read

– ಹಳೇ ವಿಡಿಯೋ ಪೋಸ್ಟ್ ಮಾಡಿ ನಡ್ಡಾ ಲೇವಡಿ
– ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ನವದೆಹಲಿ: ಕೃಷಿ ಕಾನೂನಿನ ಕುರಿತು ರೈತರ ಹೋರಾಟ ತೀವ್ರಗೊಳ್ಳುತ್ತಿದ್ದು, ಇನ್ನೊಂದೆಡೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರಮಣ ಮಾಡುತ್ತಿವೆ. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಹುಲ್ ಗಾಂಧಿ ಸಂಸತ್‍ನಲ್ಲಿ ಮಾತನಾಡಿದ ಹಳೇ ವಿಡಿಯೋ ಪೋಸ್ಟ್ ಮಾಡಿ ಲೇವಡಿ ಮಾಡಿದ್ದಾರೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಧ್ಯವರ್ತಿಗಳ ಕುರಿತು ಮಾತನಾಡಿರುವ ವಿಡಿಯೋ ಟ್ವೀಟ್ ಮಾಡಿ ಕಾಲೆಳೆದಿದ್ದಾರೆ. ವಿಡಿಯೋದಲ್ಲಿ ರಾಹುಲ್ ಗಾಂಧಿ, ರೈತರು ಮಧ್ಯವರ್ತಿಗಳಿಂದ ಕಂಗಾಲಾಗಿದ್ದು, ನೇರವಾಗಿ ಕೈಗಾರಿಕೆಗಳಿಗೆ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದು ಏನು?
ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ನನ್ನನ್ನು ಪ್ರಶ್ನಿಸಿ, 1 ಪ್ಯಾಕೆಟ್ ಚಿಪ್ಸ್‍ಗೆ 10 ರೂ. ಅದೇ ರೈತರು 10 ರೂ.ಗೆ ಎರಡು ಕೆ.ಜಿ. ಆಲೂಗಡ್ಡೆ ಮಾರುತ್ತಾರೆ. ಇದರ ಹಿಂದಿನ ಜಾದೂ ಏನು ವಿವರಿಸಿ ಎಂದು ಕೇಳಿದರು. ಇದಕ್ಕೆ ಕಾರಣವೇನು ಎಂದು ನಾನು ಅವರನ್ನೇ ಪ್ರಶ್ನಿಸಿದೆ. ಆಗ ರೈತರು ಉತ್ತರಿಸಿ, ಫ್ಯಾಕ್ಟರಿಗಳು ನಮ್ಮಿಂದ ತುಂಬಾ ದೂರ ಇವೆ. ಹೀಗಾಗಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ನಾವೇನಾದರೂ ನೇರವಾಗಿ ಫ್ಯಾಕ್ಟರಿಗಳಿಗೆ ಆಲೂಗಡ್ಡೆಗಳನ್ನು ಮಾರಾಟ ಮಾಡಿದರೆ, ಎಲ್ಲ ಹಣವನ್ನು ನಾವೇ ಪಡೆಯುತ್ತೇವೆ. ಇದರಿಂದ ಮಧ್ಯವರ್ತಿಗಳಿಗೆ ನೀಡುವ ಹಣ ಉಳಿಯುತ್ತದೆ ಎಂದು ವಿವರಿಸಿದ್ದರು.

ರಾಹುಲ್ ಗಾಂಧಿ ಅಮೇಥಿ ಸಂಸದರಾಗಿದ್ದಾಗ ಲೋಕಸಭಾ ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಹಂಚಿಕೊಂಡು ಜೆ.ಪಿ.ನಡ್ಡಾ ಅವರು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ರೈತರ ಪ್ರತಿಭಟನೆಯಲ್ಲಿ ರಾಜಕೀಯ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ್ದಾರೆ.

ಯಾವ ಜಾದೂ ನಡೆಯುತ್ತಿದೆ ರಾಹುಲ್ ಜೀ, ಇದೀಗ ವಿರೋಧ ವ್ಯಕ್ತಪಡಿಸುವವರು ಆಗ ಏಕೆ ಸಮರ್ಥಿಸಿಕೊಂಡಿರಿ. ರೈತರ ಹಾಗೂ ದೇಶದ ಹಿತಾಸಕ್ತಿ ನಿಮಗೆ ಸಂಬಂಧವಿಲ್ಲ. ನೀವು ಕೇವಲ ರಾಜಕೀಯ ಮಾಡಬೇಕು. ಆದರೆ ನಿಮ್ಮ ಬೂಟಾಟಿಕೆ ಕೆಲಸ ಮಾಡುವುದಿಲ್ಲ ಎಂಬುದು ನಿಮ್ಮ ದುರದೃಷ್ಟ. ದೇಶದ ಜನ ಹಾಗೂ ರೈತರು ನಿಮ್ಮ ಡಬಲ್ ಸ್ಟ್ಯಾಂಡರ್ಡ್ ಅನ್ನು ಗುರುತಿಸಿದ್ದಾರೆ ಎಂದು ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *