ಆರ್ ಶಂಕರ್ ತವರಿನಲ್ಲಿ ಸ್ಯಾಂಡ್ ಮಾಫಿಯಾ – ಎತ್ತಿನಬಂಡಿ, ಟ್ರ್ಯಾಕ್ಟರ್‌ಗಳಲ್ಲೇ ಮರಳು ಶಿಫ್ಟ್..!

Public TV
1 Min Read

ಹಾವೇರಿ: ಲಾರಿ ಕ್ಯಾಂಟರ್, ಟ್ರ್ಯಾಕ್ಟರ್‌ಗಳಲ್ಲಿ ಮರಳನ್ನ ಸಾಗಾಟ ಮಾಡ್ತಿರೋದನ್ನು ನೋಡಿರ್ತೀರಾ. ಆದರೆ ನೂತನ ಸಚಿವ ಆರ್ ಶಂಕರ್ ತವರಿನಲ್ಲಿ ದಂಧೆಕೋರರು ಅದಕ್ಕೂ ಒಂದು ಹೆಜ್ಜೆ ಮುಂದೋಗಿದ್ದಾರೆ. ಎತ್ತಿನ ಬಂಡಿಗಳಲ್ಲೇ ಅಕ್ರಮವಾಗಿ ಮರಳು ಸಾಗಿಸಲಾಗ್ತಿದೆ.

ಹೌದು, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೀಲದಹಳ್ಳಿ, ಮೆಡ್ಲೇರಿ, ಕೋಣನತಂಬಗಿ ಸೇರಿದಂತೆ ತುಂಗಭದ್ರಾ ನದಿ ಪಾತ್ರದ ಹಲವು ಗ್ರಾಮಗಳಲ್ಲಿ ಎತ್ತಿನ ಬಂಡಿಗಳ ಮೂಲಕವೇ ಮರಳು ಸಾಗಾಣಿಕೆ ಮಾಡಲಾಗ್ತಿದೆ. ನದಿಗೆ ಬಂಡಿಗಳನ್ನ ಇಳಿಸಿ, ಮರಳು ತುಂಬಿಕೊಂಡು ಹೋಗಲಾಗ್ತಿದೆ. ಎತ್ತಿನ ಬಂಡಿಯಲ್ಲಿ ತಂದ ಮರಳನ್ನ ಸ್ಟಾಕ್ ಮಾಡಿ ನಂತರ ಲಾರಿ, ಕ್ಯಾಂಟರ್, ಟ್ರ್ಯಾಕ್ಟರ್ ಗಳ ಮೂಲಕ ರವಾನಿಸ್ತಿದ್ದಾರೆ.

ಹಗಲು ರಾತ್ರಿ ಎನ್ನದೆ ಎತ್ತಿನ ಬಂಡಿಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸಲಾಗ್ತಿರೋದ್ರಿಂದ ತುಂಗಭದ್ರಾ ಮತ್ತು ವರದಾ ನದಿಯ ಒಡಲು ಸಂಪೂರ್ಣ ಬರಿದಾಗ್ತಿದೆ. ಕೆಲವೆಡೆಯಂತೂ ಮರಳು ತರೋಕೆ ಅಂತಲೆ ಎತ್ತಿನ ಟೈರ್ ಬಂಡಿಗಳನ್ನ ತರಲಾಗಿದೆ ಅಂತೆ. ಪ್ರತಿದಿನ ಒಂದೊಂದು ಎತ್ತಿನ ಬಂಡಿಯಲ್ಲಿ ಹದಿನೈದು, ಇಪ್ಪತ್ತು ಟ್ರಿಪ್ ಮರಳು ತುಂಬಲಾಗ್ತಿದೆ. ಹಗಲು ಎತ್ತಿನ ಗಾಡಿಗಳ ಆರ್ಭಟವಿದ್ರೆ ರಾತ್ರಿ ವೇಳೆಯಲ್ಲಿ ಲಾರಿ, ಕ್ಯಾಂಟರ್ ಮತ್ತು ಟ್ರ್ಯಾಕ್ಟರ್‌ಗಳ ಸದ್ದು ಜೋರಾಗಿರುತ್ತದೆ. ಜೆಸಿಬಿಯಲ್ಲೂ ಮರಳು ಅಗೆಯಲಾಗ್ತಿದೆ.

ಈ ಬಗ್ಗೆ ಅದೆಷ್ಟೋ ಬಾರಿ ಅಕ್ರಮ ಮರಳುಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ರೂ ಗಣಿ ಮತ್ತು ಭುವಿಜ್ಞಾನ ಇಲಾಖೆ, ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇದಕ್ಕೆಲ್ಲಾ ಯಾವಾಗ ಬ್ರೇಕ್ ಬೀಳುತ್ತಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *