ಆರ್‌ಜೆಡಿ ಹಿರಿಯ ಮುಖಂಡ ರಘುವಂಶ ಪ್ರಸಾದ್ ಸಿಂಗ್ ವಿಧಿವಶ

Public TV
2 Min Read

ನವದೆಹಲಿ: ಬಿಹಾರದ ಹಿರಿಯ ರಾಜಕಾರಣಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಹಿರಿಯ ಮುಖಂಡ ರಘುವಂಶ ಪ್ರಸಾದ್ ಸಿಂಗ್ ಅವರು ಇಂದು ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

74 ವರ್ಷದ ರಘುವಂಶ ಅವರಿಗೆ ಜೂನ್ ತಿಂಗಳಲ್ಲಿ ಕೋವಿಡ್ 19 ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ಚಿಕಿತ್ಸೆಗಾಗಿ ಅವರನ್ನು ಪಾಟ್ನಾದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಕಂಡು ಬಂದಿತ್ತು. ಹೀಗಾಗಿ ಅವರನ್ನು ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕಳೆದೆರಡು ದಿನಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಹೀಗಾಗಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಆದರೆ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಉಸಿರಾಟದ ತೊಂದರೆ ಉಂಟಾಗಿ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.

ಇಂದು ಬೆಳಗ್ಗೆ ಬಿಹಾರದಲ್ಲಿ ಪೆಟ್ರೋಲಿಯಂ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರು ಸಿಂಗ್ ಅವರಿಗೆ ಗೌರವ ಸಲ್ಲಿಸುವ ಮೂಲಕ ತಮ್ಮ ಭಾಷಣ ಆರಂಭಿಸಿದರು. ರಘುವಂಶ ಪ್ರಸಾದ್ ಸಿಂಗ್ ಇಂದು ನಮ್ಮ ನಡುವೆ ಇಲ್ಲ. ಅವರ ನಿಧನವು ಬಿಹಾರದ ರಾಜಕೀಯ ಕ್ಷೇತ್ರದಲ್ಲಿ ಮತ್ತು ದೇಶದಲ್ಲಿ ನಷ್ಟ ಉಂಟುಮಾಡಿದೆ ಎಂದು ತಿಳಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಈ ಹಿಂದೆ ಐಸಿಯುನಿಂದಲೇ ರಘುವಂಶ ಅವರು ಆರ್‌ಜೆಡಿಗೆ ರಾಜೀನಾಮೆ ಪತ್ರವನ್ನು ನೀಡಿದ್ದರು. ಪಕ್ಷದ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೂ ಕೂಡ ಈ ಕುರಿತು ತಮ್ಮ ಕೈಯಾರೆ ಪತ್ರ ಬರೆದಿದ್ದರು. ಆದರೆ ಲಾಲೂ ಅವರು ತಮ್ಮ ಹಳೆಯ ಗೆಳೆಯನನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಒಪ್ಪಲಿಲ್ಲ. ಅಲ್ಲದೆ ನಾನು ಅದನ್ನು ನಂಬಲು ಸಾಧ್ಯವಿಲ್ಲ. ಮೊದಲು ನೀವು ಹುಷಾರಾಗಿ, ನಂತರ ಈ ಕುರಿತು ಮಾತುಕತೆ ನಡೆಸೋಣ. ನೀವು ಎಲ್ಲಿಗೂ ಹೋಗುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು  ತಿಳಿಸಿದ್ದರು.

ಆದರೆ ಇಂದು ರಘುವಂಶ ಅವರು ನಿಧನರಾಗಿದ್ದು, ಈ ಸಂಬಂಧ ಟ್ವೀಟ್ ಮಾಡಿ ಲಾಲು ಪ್ರಸಾದ್ ಯಾದವ್ ಬೇಸರ ವ್ಯಕ್ತಪಡಿಸಿದರು. ಆತ್ಮೀಯ ರಘುವಂಶ ಬಾಬು.. ನೀವು ಏನು ಮಾಡಿಡ್ರಿ?. ಎರಡು ದಿನಗಳ ಹಿಂದೆಯಷ್ಟೇ ನೀವು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದ್ದೆ. ಆದರೆ ನೀವು ಇಷ್ಟೊಂದು ದೂರ ಹೊರಟು ಹೋಗಿದ್ದೀರಿ.. ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ತುಂಬಾನೇ ದುಃಖಿತನಾಗಿದ್ದೇನೆ.. ನಿಮ್ಮನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *