ಆಗುಂಬೆ, ಸೋಮೇಶ್ವರದಲ್ಲಿ ಪ್ರಾಣಿಗಳಿಗೆ ತಿಂಡಿ ಕೊಟ್ರೆ ಕೇಸ್

Public TV
2 Min Read

– ವಾಹನ ವಾಶ್ ಮಾಡಿದ್ರೂ ಫೈನ್

ಉಡುಪಿ: ಆಗುಂಬೆ ಘಾಟಿ ಸೋಮೇಶ್ವರದಲ್ಲಿ ಕೋತಿ, ಲಂಗೂರ್ ಗಳು ಸಿಕ್ಕಿತು ಅಂತ ಇನ್ನು ಮುಂದೆ ನೀವೇನಾದರೂ ತಿಂಡಿ ಪ್ಯಾಕೆಟ್ಟುಗಳನ್ನು ಎಸೆದರೆ, ಚಿಪ್ಸ್, ಜಂಕ್ ಫುಡ್ ಕೊಟ್ಟರೆ ಅರಣ್ಯಾಧಿಕಾರಿಗಳಿಗೂ ನೀವು ದಂಡ ಬೇಕಾಗುತ್ತದೆ.

ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ತಿನ್ನಿಸುವವರು ಮತ್ತು ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗವು ವಾರಾಂತ್ಯದಲ್ಲಿ ಕಾರ್ಯಾಚರಣೆಗೆ ಇಳಿದಿದೆ.

ಸೋಮೇಶ್ವರದಿಂದ ಆಗುಂಬೆವರೆಗಿನ 10ಕಿ.ಮೀ. ರಸ್ತೆಯುದ್ದಕ್ಕೂ ಹೆಬ್ರಿ, ಕಾರ್ಕಳ, ಅಮಾಸೆಬೈಲು ಮತ್ತು ಸಿದ್ಧಾಪುರ ವನ್ಯಜೀವಿ ವಿಭಾಗದ ಸುಮಾರು 40 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಣಿಗಳಿಗೆ ಆಹಾರ ತಿನಿಸುವ ಮತ್ತು ರಸ್ತೆ ಬದಿ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಎಸೆಯುವ ವಾಹನ ಚಾಲಕರಿಂದ ದಂಡ ವಸೂಲಿ ಮಾಡಲಾಗ್ತಿದೆ. ರಸ್ತೆ ಬದಿ ಆಹಾರ ಎಸೆದ ಮೂವರಿಂದ ಅರಣ್ಯ ಇಲಾಖೆ ಸಿಬ್ಬಂದಿ ದಂಡ ವಸೂಲಿ ಮಾಡಿದರು.

ಅದೇ ರೀತಿ ಸೋಮೇಶ್ವರದಲ್ಲಿ ಘಾಟಿ ಆರಂಭದ ಸೋಮೇಶ್ವರದಲ್ಲಿ ಮತ್ತು ಆಗುಂಬೆ ಕೊನೆಯಲ್ಲಿ ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸಿದರು. ಜಾಗೃತಿ ಫಲಕಗಳನ್ನು ನೆಟ್ಟು ಜನಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಭಗವಸ್‍ದಾಸ್ ಕುಡ್ತಲ್‍ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ನಾಲ್ಕು ವಲಯಗಳ ಸಿಬ್ಬಂದಿ ಪಾಲ್ಗೊಂಡಿದ್ದರು.

ಹೆಬ್ರಿ ವಲಯ ವನ್ಯಜೀವಿ ಅರಣ್ಯಾಧಿಕಾರಿ ಅನಿಲ್ ಕುಮಾರ್ ಮಾತನಾಡಿ, ನಿಗದಿ ಪಡಿಸಿದ ದಂಡ ರಸ್ತೆಬದಿ ತ್ಯಾಜ್ಯ, ಪ್ಲಾಸ್ಟಿಕ್ ಕಸ ಇತ್ಯಾದಿ ಎಸೆಯುವುದಕ್ಕೆ 100 ರೂ., ರಸ್ತೆ ಬದಿ ಪೂರ್ವಾನುಮತಿ ಇಲ್ಲದೆ ಅರಣ್ಯಕ್ಕೆ ಪ್ರವೇಶ ಮಾಡುವುದು, ರಸ್ತೆಯ ಬದಿಯ ಜಲಪಾತಗಳಲ್ಲಿ ಸ್ನಾನ ಮಾಡುವುದು, ರಸ್ತೆ ವಾಹನ ತೊಳೆಯುವುದು, ಅಡುಗೆ ತಯಾರಿಸುವುದು, ರಾಷ್ಟ್ರೀಯ ಉದ್ಯಾನವನದ ಒಳಗೆ ಸಕಾರಣವಿಲ್ಲದೆ ನಿಗದಿಪಡಿಸಿದ ಅವಧಿಗಿಂತ ಹೆಚ್ಚು ಸಮಯ ಉಳಿಯುವುದಕ್ಕೆ ತಲಾ 200 ರೂ. ಮತ್ತು ವನ್ಯಪ್ರಾಣಿಗಳಿಗೆ ತಿಂಡಿ ತಿನಿಸು ನೀಡುವುದಕ್ಕೆ 50 ರೂ. ದಂಡವನ್ನು ನಿಗದಿಪಡಿಸಲಾಗಿದೆ ಎಂದರು.

ಈ ಕಾರ್ಯಾಚರಣೆಯನ್ನು ಆಗುಂಬೆ ಘಾಟಿಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾದು ಹೋಗುವ ಶನಿವಾರ ಮತ್ತು ರವಿವಾರ ನಡೆಸಲಾಗುತ್ತಿದೆ. ಮನುಷ್ಯ ಸೇವಿಸುವ ಆಹಾರ, ಜಂಕ್ ಫುಡ್‍ಗಳನ್ನು ಪ್ರಾಣಿಗಳಿಗೆ ನೀಡುವುದರಿಂದ ಅದರ ಆಹಾರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಅದರ ಆಹಾರ ಕ್ರಮಗಳನ್ನು ಬದಲಾಗಿ, ಇದೇ ಆಹಾರಕ್ಕೆ ಹೊಂದಿಕೊಳ್ಳುವ ಸಾಧ್ಯತೆ ಇರುತ್ತದೆ. ಆಹಾರ ಸಿಗದೆ ಇದ್ದಾಗ ಮಕ್ಕಳು, ಮನುಷ್ಯರ ಮೇಲೆ ದಾಳಿ ನಡೆಸುವ ಅಪಾಯ ಇರುತ್ತದೆ. ಅಲ್ಲದೆ ರೋಗ ಹರಡುವಿಕೆಗೂ ಕಾರಣವಾಗುತ್ತದೆ. ಅಧಿಕ ಹೋರಾಟಗಾರರಿಂದ ಹಲವು ಬಾರಿ ಅರಣ್ಯ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆ ಈ ಕಾರ್ಯಾಚರಣೆಗೆ ಇಳಿದಿದೆ.

Share This Article
Leave a Comment

Leave a Reply

Your email address will not be published. Required fields are marked *