ನವದೆಹಲಿ: ದೇಶದ ರಾಜಧಾನಿ ಕೊರೊನಾ ಭೀಕರತೆ ಹೆಚ್ಚಾಗುತ್ತಿದ್ದು, ಆಕ್ಸಿಜನ್ ಕೊರತೆ ಉಂಟಾಗಿದೆ. ಇಷ್ಟು ದಿನ ಹಾಲಿಗೆ, ತರಕಾರಿಗೆ ಕ್ಯೂ ನಿಲ್ಲುತ್ತಿದ್ದ ಜನ ಆಕ್ಸಿಜನ್ ಗಾಗಿ ಸರದಿಯಲ್ಲಿ ನಿಂತಿದ್ದಾರೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಹಿನ್ನೆಲೆ ಸೋಂಕಿತರ ಕುಟುಂಬಸ್ಥರು ಮನೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಸಾರ್ವಜನಿಕರು ನಿಂತಿದ್ರೆ, ಮತ್ತೊಂದು ಅಂಬುಲೆನ್ಸ್ ಗಳು ಆಕ್ಸಿಜನ್ ಘಟಕಗಳ ಮುಂದೆ ನಿಂತಿವೆ.
ಇಂದು ಬೆಳಗ್ಗೆ ದೆಹಲಿಯ ನಾರಾಯಣ್ ಆಕ್ಸಿಜನ್ ಫಿಲ್ಲಿಂಗ್ ಪ್ಲಾಂಟ್ ಮುಂದೆ ಜನ ಸಿಲಿಂಡರ್ ಹಿಡಿದು ಸರದಿಯಲ್ಲಿ ನಿಂತಿದ್ದರು. ಈ ವೇಳೆ ತಮಗೆ ಮೊದಲು ಆಕ್ಸಿಜನ್ ನೀಡಬೇಕೆಂದು ಜನರ ನಡುವೆ ಗಲಾಟೆ ಸಹ ಉಂಟಾಗಿತ್ತು. ಬೆಳಗಿನ ಜಾವ ನಾಲ್ಕು ಗಂಟೆಗೆ ಬಂದು ಸಾಲಿನಲ್ಲಿ ನಿಂತಿದ್ದೇವೆ. ಈಗ ಬಂದು ಪೊಲೀಸರು ಬ್ಯಾರಿಕೇಡ್ ಹಾಕಿದ್ರೆ ಹೇಗೆ? ಮನೆಯಲ್ಲಿ ರೋಗಿಗಳು ನರಳಾಡುತ್ತಿದ್ದಾರೆ ಎಂದು ಸರದಿಯಲ್ಲಿ ನಿಂತ ಜನ ಆಕ್ರೋಶ ಹೊರ ಹಾಕಿದರು.
ಜಿಲ್ಲಾಧಿಕಾರಿಗಳ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಅವರು ಆಕ್ಸಿಜನ್ ಮರುಭರ್ತಿಗೆ ಆದೇಶ ನೀಡಿದ್ರೆ ನಾವು ಬ್ಯಾರಿಕೇಡ್ ತೆಗೆಯುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಬಹುತೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿದೆ. ಕೊನೆ ಕ್ಷಣದಲ್ಲಿ ಆಕ್ಸಿಜನ್ ಆಸ್ಪತ್ರೆಗಳಿಗೆ ತಲುಪುತ್ತಿದೆ.