ಆಕ್ಸಿಜನ್ ಇಲ್ಲದೆ ಮೂವರಷ್ಟೇ ಸಾವು ಅಂತ ಸಚಿವರಿಬ್ಬರ ಸಮರ್ಥನೆ

Public TV
2 Min Read

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿರುವ ವಿಚಾರದಲ್ಲಿ ಸರ್ಕಾರ ತನ್ನ ಸಮರ್ಥನೆಯ ಚಾಳಿಯನ್ನ ಮುಂದುವರಿಸಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಕೆ.ಸುಧಾಕರ್, ಆಕ್ಸಿಜನ್ ಇಲ್ಲದೇ ಮೂವರಷ್ಟೇ ಸಾವನ್ನಪ್ಪಿದ್ದು ಅಂತ ಸಮರ್ಥಿಸಿಕೊಂಡಿದ್ದಾರೆ. ಹಾಗಾದ್ರೆ ಸಚಿವರ ಪ್ರಕಾರ ಆ ಮೂರು ಜೀವಗಳಿಗೆ ಬೆಲೆ ಇಲ್ಲವಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗ್ತಿದ್ದಂತೆ ಎಚ್ಚೆತ್ತ ಸಚಿವರು ಚಾಮರಾಜನಗರಕ್ಕೆ ದೌಡಾಯಿಸಿದರು. ಪರಿಶೀಲನೆ ನಡೆಸಿ ಇಬ್ಬರು ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ 24 ಕೋವಿಡ್ ಸಂಬಂಧಿತ ಸಾವು ಆಗಿದೆ. ಆಮ್ಲಜನಕದ ಕೊರತೆಯಿಂದ 24 ಜನ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಎಲ್ಲ ಸಾವುಗಳು ಆಮ್ಲಜನಕ ಕೊರತೆಯಿಂದ ಸಂಭವಿಸಿಲ್ಲ. ಬೇರೆ ಬೇರೆ ಕಾರಣಗಳಿಂದಲೂ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ನಡೆಬೇಕಿದೆ. ಸರ್ಕಾರ ಸಹ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದರು.

ಆರೋಗ್ಯ ಸಚಿವ ಸುಧಾಕರ್ ಮಾತನಾಡಿ, 24 ಗಂಟೆಯಲ್ಲಿ 24 ಸಾವು ಆಗಿರೋದು ನೋವು ತಂದಿದೆ. ರಾತ್ರಿ 12 ಗಂಟೆವರೆಗೂ ಆಕ್ಸಿಜನ್ ಲಭ್ಯತೆ ಇತ್ತು. 123 ಕೋವಿಡ್ ರೋಗಿಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೇವಲ ಮೂವರು ಪ್ರಾಣವಾಯು ಇಲ್ಲದೇ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ ಅಂತ ನುಣಚಿಕೊಂಡರು. ಇದನ್ನೂ ಓದಿ: ಸತ್ತಿರೋದು 24 ಅಲ್ಲ, 34 ರಿಂದ 35 – ಸುಳ್ಳು ಹೇಳ್ತಿದೆಯಾ ಸರ್ಕಾರ? – ಕಾಂಗ್ರೆಸ್ ಶಾಸಕರ ಸುದ್ದಿಗೋಷ್ಠಿ ತಡೆದ ಅಧಿಕಾರಿಗಳು

24 ಅಲ್ಲ 35: ನನ್ನ ಪ್ರಕಾರ ಆಮ್ಲಜನಕ 34 ರಿಂದ 35 ಜನ ಸಾವನ್ನಪ್ಪಿದ್ದಾರೆ. ಪ್ರತಿದಿನ ಜಿಲ್ಲಾ ಸರ್ಜನ್, ಡಿಸಿ ಜೊತೆ ಮಾತನಾಡುತ್ತಿದ್ದೇನೆ. ನಿನ್ನೆ ವೈದ್ಯಾಧಿಕಾರಿಗಳು ಆಕ್ಸಿಜನ್ ಕೊರತೆ ಇದೆ ಎಂದು ಹೇಳಿದ್ದರು. ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಮೈಸೂರು ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವಂತೆ ಹೇಳಿದ್ರು. ಅವರಿಗೆ ಹೇಳಿದ್ರೂ ಆಕ್ಸಿಜನ್ ಬರಲಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ-ವೆಂಟಿಲೇಟರ್‌ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ

Share This Article
Leave a Comment

Leave a Reply

Your email address will not be published. Required fields are marked *