ಆಕ್ಟ್ 1978 ಸಿನಿಮಾ ಮೆಚ್ಚಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Public TV
2 Min Read

ಬೆಂಗಳೂರು: ಸದ್ಯ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಆಕ್ಟ್ 1978. ಸಿನಿಮಾ ರಿಲೀಸ್ ಆಗಿ ಇನ್ನೂ 3 ದಿನ ಕಳೆದಿಲ್ಲ, ಎಲ್ಲರ ಬಾಯಲ್ಲೂ ಇದರದ್ದೇ ಮಾತು. ಅಷ್ಟೇ ಅಲ್ಲ ಈ ಸಿನಿಮಾವನ್ನ ಸ್ಟಾರ್ ನಟರು ಮೆಚ್ಚಿಕೊಂಡಿದ್ದು ಚಿತ್ರತಂಡಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರತಂಡಕ್ಕೆ ಮತ್ತಷ್ಟು ಬಲ ತುಂಬಲು ಕೈ ಜೋಡಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಸಹಾಯ ಮಾಡುವ ಯಜಮಾನ ಅನ್ನೋದು ಎಲ್ಲರಿಗೂ ಗೊತ್ತು. ಯಾರೇ ಹೊಸಬರು ಬೆಳೀತಿನಿ ಅಂತ ಬಂದ್ರೆ ಅವರ ಹಿಂದೆ ನಿಂತು ಸಪೋರ್ಟ್ ಮಾಡ್ತಾರೆ. ಹಾಗೇ ಪ್ರತಿಭೆಗಳಿಗೆ ಯಾವಾಗಲೂ ದರ್ಶನ್ ಅವರ ಪ್ರೋತ್ಸಾಹ ಇದ್ದೇ ಇರುತ್ತೆ. ಆಕ್ಟ್ 1978 ಸಿನಿಮಾದ ಬಗ್ಗೆ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿರುವ ಪಾಸಿಟಿವ್ ರೆಸ್ಪಾನ್ಸ್ ಮತ್ತು ಚಿತ್ರದ ವಿಮರ್ಶೆಗಳನ್ನು ನೋಡಿ ದರ್ಶನ್ ಚಿತ್ರತಂಡದವರಿಗೆ ಇನ್ನಷ್ಟು ಬಲ ತುಂಬಿದ್ದಾರೆ. ಚಿತ್ರ ತಂಡದ ಸದಸ್ಯರನ್ನು ಅವರ ಮನೆಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಒಂದಷ್ಟು ಮಾತುಕತೆಗಳನ್ನ ಆಡಿ, ಸಿನಿಮಾದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆನಂತರ ಉಪಚರಿಸಿ, ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿ ಕಳುಹಿಸಿದ್ದಾರೆ. ಇದು ಇಡೀ ಚಿತ್ರತಂಡಕ್ಕೆ ಹೆಚ್ಚು ಸಂತಸ ನೀಡಿದ ವಿಚಾರವಾಗಿದೆ.

ಕೊರೊನಾ ವೈರಸ್ ಕಾರಣದಿಂದ ಬರೋಬ್ಬರಿ 8 ತಿಂಗಳ ಕಾಲ ಚಿತ್ರಮಂದಿರವನ್ನು ಕಂಪ್ಲೀಟ್ ಮುಚ್ಚಲಾಗಿತ್ತು. ಆದ್ರೆ ಅನ್ ಲಾಕ್ 5 ರ ನಂತರ ಥಿಯೇಟರ್ ಗಳನ್ನು ತೆರೆಯಲು ಅನುಮತಿ ಸಿಕ್ಕಿತ್ತು. ಆದರೆ ಯಾವ ಉಪಯೋಗವೂ ಇರಲಿಲ್ಲ. ಪ್ರೇಕ್ಷಕರ ನೀರಸ ಪ್ರತಿಕ್ರಿಯೆ ಥಿಯೇಟರ್ ಮಾಲೀಕರು, ಸಿನಿಮಾ ನಿರ್ಮಾಪಕರಿಗೆ ತಲೆ ನೋವಾಗಿ ಪರಣಮಿಸಿತ್ತು. ಇಂಥ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡುವುದಾದರೆ ಹೇಗೆ ಎಂಬುದನ್ನು ಯೋಚಿಸಿ ಹೊಸ ಸಿನಿಮಾಗಳ ಬಿಡುಗಡೆಯ ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ. ಆದರೆ ಅಂಥದ್ದೊಂದು ಹೊಸ ನಾಂದಿಗೆ ಮುನ್ನುಡಿ ಬರೆದಿದ್ದು ನಿರ್ದೇಶಕ ಮಂನ್ಸೋರೆ.

ಆಕ್ಟ್ 1978 ಸಿನಿಮಾದಿಂದ ಜನರನ್ನು ಮತ್ತೆ ಥಿಯೇಟರ್ ಗೆ ಕರೆ ತರುವ ಉದ್ದೇಶ ಅವರದ್ದಾಗಿತ್ತು. ಇದೀಗ ಅವರ ಆಸೆ ಈಡೇರಿದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟ್ 1978 ಸಿನಿಮಾಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯ ಜನರನ್ನು ಕೊರೊನಾ ಭಯ ಬಿಟ್ಟು ಥಿಯೇಟರ್ ನತ್ತ ಕರೆ ತರುವಂತೆ ಮಾಡುತ್ತಿದೆ. ಥಿಯೆಟರ್ ಗಳಲ್ಲಿ ಹೌಸ್ ಫುಲ್ ಎಂಬ ಬೋರ್ಡ್ ನೋಡಿನೇ ಎಷ್ಟೋ ವರ್ಷಗಳು ಕಳೆದು ಹೋಗಿತ್ತು. ಆದರೆ ಈ ಸಿನಿಮಾದಿಂದ ಆ ಬೋರ್ಡ್ ನ್ನು ಮತ್ತೆ ನೋಡುವಂತಾಗಿದೆ. ವೀರೇಶ್ ಥಿಯೇಟರ್ ನಿನ್ನೆಯೆಲ್ಲಾ ಹೌಸ್ ಫುಲ್ ಆಗಿತ್ತು. ಈ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

1978ರಿಂದಲೂ ಭ್ರಷ್ಟ ವ್ಯವಸ್ಥೆಯನ್ನ ಕುಟುಕುವಂತಹ, ಸಮಾಜದ ಹುಳುಕನ್ನ ತೋರಿಸುವಂತಹ ಕೆಲಸಗಳು ತೆರೆಯಮೇಲೆ ಆಗುತ್ತಲೇ ಇವೆ. ಅನೇಕ ಸಿನಿಮಾಗಳಲ್ಲಿ ಹೀರೋಗಳು ನಾನಾ ಅವತಾರಗಳನ್ನ ಎತ್ತಿ ಭ್ರಷ್ಟ ವ್ಯವಸ್ಥೆಯನ್ನ ಹೋಗಲಾಡಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಆಗಿನಿಂದ ಈಗಿನವರೆಗೂ ವ್ಯವಸ್ಥೆ ಮಾತ್ರ ಬದಲಾಗಿಲ್ಲ. ಹೀಗಾಗಿ ಭವಿಷ್ಯದ ಭಾರತದ ಪ್ರಜೆಯನ್ನ ಹೊಟ್ಟೆಯಲ್ಲಿ ಹೊತ್ತ ಹೆಣ್ಣು ಮಗಳೊಬ್ಬಳು ಸರ್ಕಾರಿ ಕಛೇರಿಯಲ್ಲಿ ನಡೆಯುವ ಭ್ರಷ್ಟಾಚಾರ, ದುರಾಚಾರ, ಅನಾಚಾರಗಳನ್ನ ಕೊನೆಗಾಣಿಸುವ ಸಲುವಾಗಿ ಸಿಡಿದೇಳುವ ಪರಿಸ್ಥಿತಿ ಎದುರಾಗಿದೆ. ಆಕ್ಟ್ 1978 ಎಂಬ ಕಾಯಿದೆಯ ಬಗ್ಗೆ ಹೇಳುತ್ತಲೇ ಗೀತಾ ಎಂಬ ಹೆಣ್ಣು ಮಗಳೊಬ್ಬಳ ಮನಕಲಕುವ ಕಥೆಯನ್ನ ತೆರೆಮೇಲೆ ಪ್ರತಿಯೊಬ್ಬರಿಗೂ ಆಪ್ತವಾಗುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಮಂಸೋರೆ.

Share This Article
Leave a Comment

Leave a Reply

Your email address will not be published. Required fields are marked *