ಅರ್ಧದಲ್ಲೇ ಮೈದಾನ ತೊರೆದ ಉಮೇಶ್ ಯಾದವ್

Public TV
1 Min Read

ಮೆಲ್ಬರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಇದೀಗ ಮತ್ತೊಂದು ಅಘಾತ ಎದುರಾಗಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಭಾರತದ ಬಲಗೈ ವೇಗದ ಬೌಲರ್ ಉಮೇಶ್ ಯಾದವ್ ಗಾಯಕ್ಕೆ ತುತ್ತಾಗಿ ಮೈದಾನ ತೊರೆದಿದ್ದಾರೆ.

ಮೂರನೇ ದಿನದಾಟದ ಆರಂಭದಲ್ಲಿ ಬೌಲಿಂಗ್‍ಗಿಳಿದ ಉಮೇಶ್ ಯಾದವ್ ತಮ್ಮ 4ನೇ ಓವರ್ ಪೂರ್ಣಗೊಳಿಸಲಾಗದೆ ಪೆವಿಲಿಯನ್ ಸೇರಿಕೊಂಡರು. ಮೀನಖಂಡದ ನೋವಿಗೆ ಒಳಗಾದ ಉಮೇಶ್ ಫಿಸಿಯೋ ನಿತೀನ್ ಪಟೇಲ್ ಅವರ ಸಲಹೆಯ ಮೆರೆಗೆ ತಕ್ಷಣ ಮೈದಾನ ತೊರೆಯಬೇಕಾಯಿತು.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಉಮೇಶ್ ಯಾದವ್ ತಮ್ಮ ನಾಲ್ಕನೇ ಓವರ್ ಬೌಲಿಂಗ್ ಮಾಡುತ್ತಿದ್ದಾಗ ಮೀನಖಂಡದ ನೋವಿಗೊಳಗಾಗಿದ್ದಾರೆ. ತಕ್ಷಣ ಬಿಸಿಸಿಐ ವೈದ್ಯಕೀಯ ತಂಡವು ಅವರನ್ನು ಪರೀಕ್ಷಿಸಿದ್ದು, ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿದೆ ಎಂದು ಹೇಳಿಕೆ ನೀಡಿದೆ.  ಇದನ್ನೂ ಓದಿ: ಒಂದೇ ದಿನದಲ್ಲಿ 11 ವಿಕೆಟ್‌ ಪತನ – ಆಸ್ಟ್ರೇಲಿಯಾಗೆ 2 ರನ್‌ ಮುನ್ನಡೆ

ದ್ವಿತಿಯ ಇನ್ನಿಂಗ್ಸ್ ಬ್ಯಾಟಿಂಗ್‍ಗಿಳಿದ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಜೋ ಬ‌ರ್ನ್ಸ್‌ ವಿಕೆಟ್ ಪಡೆದು ಭಾರತಕ್ಕೆ ಆರಂಭಿಕ ಯಶಸ್ಸು ತಂದು ಕೊಟ್ಟ ಯಾದವ್, 3.3 ಓವರ್‍ಗಳಲ್ಲಿ 5 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ತಮ್ಮ ನಾಲ್ಕನೇ ಓವರ್‍ನ ಮೂರು ಬಾಲ್ ಬಾಕಿ ಇರುವಂತೆ ಮೈದಾನದಿಂದ ಹೊರ ನಡೆದ ಉಮೇಶ್ ಯಾದವ್ ಅವರ ಓವರ್‍ನ ಮುಂದಿನ ಮೂರು ಎಸೆತವನ್ನು ಮೊದಲ ಪಂದ್ಯವಾಡುತ್ತಿರುವ ವೇಗಿ ಸಿರಾಜ್ ಪೂರ್ಣಗೊಳಿಸಿದರು.

ಆಸ್ಟ್ರೇಲಿಯಾ ಸರಣಿಯ ಆರಂಭದಲ್ಲಿ ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಹೊರಗುಳಿದಿದ್ದರೆ, ಟೂರ್ನಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡ ಶಮಿ ತಂಡದಿಂದ ಈಗಾಗಲೇ ಬೇರ್ಪಟ್ಟಿದ್ದಾರೆ. ಇದೀಗ ಉಮೇಶ್ ಯಾದವ್ ಅವರ ಗಾಯದಿಂದಾಗಿ ಟೀ ಇಂಡಿಯಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *