ಅರ್ಜುನ ಪ್ರಶಸ್ತಿ ರೇಸ್‍ನಲ್ಲಿ ಬುಮ್ರಾ, ಧವನ್

Public TV
1 Min Read

ನವದೆಹಲಿ: ಕ್ರೀಡೆಗಳಲ್ಲಿ ವಿಶೇಷ ಪ್ರತಿಭೆಗಳನ್ನು ತೋರಿರುವ ಕ್ರೀಡಾಪಟುಗಳಿಗೆ ನೀಡಲಾಗುವ ಅರ್ಜನ ಪ್ರಶಸ್ತಿ ರೇಸ್‍ನಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಅನುಭವಿ ಆಟಗಾರ ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ. ಬಿಸಿಸಿಐ ಶೀಘ್ರವೇ ಅರ್ಜನ ಅವಾರ್ಡ್‍ಗಾಗಿ ಆಟಗಾರರ ಹೆಸರನ್ನು ಶಿಫಾರಸು ಮಾಡಲಿದ್ದು, ಬುಮ್ರಾ ಹಾಗೂ ಧವನ್ ಅವರ ಹೆಸರನ್ನು ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ. 2019ರಲ್ಲೂ ಅರ್ಜುನ್ ಅವಾರ್ಡ್ ರೇಸ್‍ನಲ್ಲಿ ಬುಮ್ರಾ ಇದ್ದರೂ ರವೀಂದ್ರ ಜಡೇಜಾ ಅವರಿಗೆ ಪ್ರಶಸ್ತಿ ಲಭಿಸಿತ್ತು.

ಬಿಸಿಸಿಐ ಈಗಾಗಲೇ ಇಬ್ಬರು ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಆಟಗಾರ್ತಿಯನ್ನು ಅರ್ಜುನ್ ಅವಾರ್ಡ್ ಗಾಗಿ ಶಿಫಾರಸು ಮಾಡಿದ್ದಾಗಿ ಪ್ರಕಟಿಸಿದೆ. ದೀಪ್ತಿ ಶರ್ಮಾ, ಶಿಖಾ ಪಾಂಡೆ ಹೆಸರು ಆಯ್ಕೆ ಆಗಿದೆ. ಸದ್ಯ ಪುರುಷರ ಕ್ರಿಕೆಟ್ ತಂಡದಿಂದ ಇಬ್ಬರು ಆಟಗಾರರ ಹೆಸರುನ್ನು ಸೂಚಿಸಲು ಬಿಸಿಸಿಐ ನಿರ್ಧರಿಸಿದ್ದಾಗಿ ತಿಳಿದುಬಂದಿದೆ.

2019ರಲ್ಲಿ ಪುರುಷರ ಕ್ರಿಕೆಟ್ ತಂಡದಿಂದ ಬುಮ್ರಾ, ಜಡೇಜಾ ಹೆಸರೊಂದಿಗೆ ಮೊಹಮ್ಮದ್ ಶಮಿ ಹೆಸರು ಕೂಡ ಶಿಫಾರಸು ಮಾಡಲಾಗಿತ್ತು. ಬುಮ್ರಾರೊಂದಿಗೆ ಹೋಲಿಸಿದರೆ ರವೀಂದ್ರ ಜಡೇಜಾ ಅನುಭವಿ ಹಾಗೂ ದೀರ್ಘ ಕಾಲದಿಂದಲೂ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಕಾರಣ ಅವರಿಗೆ ಪ್ರಶಸ್ತಿ ಲಭಿಸಿತ್ತು. ಆದರೆ ಈಗ ಬುಮ್ರಾ ಏಕದಿನ ಮಾದರಿಯ ಕ್ರಿಕೆಟ್‍ನಲ್ಲಿ ನಂ.1 ಬೌಲರ್ ಆಗಿದ್ದು, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ ಪಂದ್ಯಗಳ ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್ ಪಡೆದ ಏಷ್ಯಾದ ಏಕೈಕ ಬೌಲರ್ ಎಂಬ ದಾಖಲೆ ಬರೆದಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2018ರಲ್ಲಿ ಬಿಸಿಸಿಐ ಅರ್ಜುನ ಅವಾರ್ಡ್ ಗಾಗಿ ಶಿಖರ್ ಧವನ್, ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಹೆಸರನ್ನು ಶಿಫಾರಸು ಮಾಡಿತ್ತು. ಆ ವರ್ಷ ಮಂದಾನ ಮಾತ್ರ ಪ್ರಶಸ್ತಿ ಪಡೆದಿದ್ದರು. ಈ ಕಾರಣದಿಂದಲೇ ಧವನ್ ಅವರ ಹೆಸರನ್ನು ನೀಡಲಾಗಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *