ಅರ್ಚಕರ ಹತ್ಯೆ ಪ್ರಕರಣ – 9 ಆರೋಪಿಗಳಿಗೆ ನ್ಯಾಯಾಂಗ ಬಂಧನ

Public TV
1 Min Read

– 4.7 ಲಕ್ಷ ಹಣ, ಫೋನ್, ಬೈಕ್, ಕಾರು ವಶ

ಮಂಡ್ಯ: ಜಿಲ್ಲೆಯಲ್ಲಿ ಮೂವರು ಅರ್ಚಕರನ್ನು ಹತ್ಯೆ ಮಾಡಿ, ದೇವಸ್ಥಾನದ ಹುಂಡಿ ದೋಚಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಮತ್ತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಒಟ್ಟು ಈ ಪ್ರಕರಣಗಳಲ್ಲಿ ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:  ಅರ್ಚಕರನ್ನು ಕೊಂದ ಮೂವರು ಹಂತಕರ ಮೇಲೆ ಪೊಲೀಸರಿಂದ ಶೂಟ್‍ಔಟ್

ಸೆಪ್ಟೆಂಬರ್ 14 ರಂದು ಕೊಲೆ ಮತ್ತು ದರೋಡೆ ಆರೋಪದ ಮೇಲೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡಿದ ವೇಳೆ ಇನ್ನೂ ನಾಲ್ವರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಬಂಧಿತ ಆರೋಪಿಗಳ ಮಾಹಿತಿ ಮೇರೆಗೆ ತಲೆಮರಿಸಿಕೊಂಡಿದ್ದ ನಾಲ್ವರನ್ನು ಬಂಧಿಸಲು ಬಲೆ ಬೀಸಿದ್ದರು. ಇದೀಗ ಆ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಶಿವು, ಮಂಜು, ಶಿವರಾಜ್ ಹಾಗೂ ಗಣೇಶ್ ಎಂದು ಗುರುತಿಸಲಾಗಿದೆ. ಈಗ ಬಂಧಿತರಾಗಿರುವ ನಾಲ್ಕು ಮಂದಿಯಿಂದ 4.7 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್, 2 ಬೈಕ್ ಮತ್ತು 1 ಕಾರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಸೆಪ್ಟೆಂಬರ್ 10ರ ಮಧ್ಯರಾತ್ರಿ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿರುವ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಕೊಲೆ ಗೈದು ದೇವಸ್ಥಾನದಲ್ಲಿದ್ದ ಮೂರು ಹುಂಡಿಯ ಹಣವನ್ನು ದೋಚಿಕೊಂಡು ಹಂತಕರು ಪರಾರಿಯಾಗಿದ್ದರು. ಪ್ರಕರಣ ನಡೆದ ಮೂರೇ ದಿನಗಳಲ್ಲಿ ಪೊಲೀಸರು ಐದು ಮಂದಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇವರನ್ನು ಬಂಧಿಸುವ ವೇಳೆ ಮದ್ದೂರು ಮಳವಳ್ಳಿ ರಸ್ತೆಯ ಸಾದೊಳಲು ಗೇಟ್ ಬಳಿ ಆರೋಪಿಗಳಾದ ವಿಜಿ, ಗಾಂಧಿ ಹಾಗೂ ಮಂಜು ಎಂಬವರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಮೂವರಿಗೂ ಕಾಲಿಗೆ ಪೆಟ್ಟು ಬಿದ್ದಿತ್ತು.

Share This Article
Leave a Comment

Leave a Reply

Your email address will not be published. Required fields are marked *