ಅಯೋಧ್ಯೆ ರೀತಿ ಕಾಶಿ, ಮಥುರಾದಲ್ಲಿ ಮಸೀದಿ ಧ್ವಂಸ ಆಗಲಿದೆ: ಸಚಿವ ಈಶ್ವರಪ್ಪ

Public TV
1 Min Read

ಶಿವಮೊಗ್ಗ: ಅಯೋಧ್ಯೆಯಲ್ಲಿ ಮಸೀದಿ ತೆರವುಗೊಳಿಸಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುವುದು ಬಹುಸಂಖ್ಯಾತ ಹಿಂದೂಗಳ ಆಶಯವಾಗಿತ್ತು. ಇಂದು ನಮ್ಮೆಲ್ಲರ ಆಸೆ ಈಡೇರಿದೆ. ಆದರೆ ಅದೇ ರೀತಿ ಕಾಶಿ ಹಾಗೂ ಮಥುರಾದಲ್ಲಿ ಇರುವ ಮಸೀದಿ ಸಹ ಧ್ವಂಸ ಆಗಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗ ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇಂದು ರಾಮ ಮಂದಿರ ನಿರ್ಮಾಣಕ್ಜೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಯಾವುದೇ ವಿಘ್ನ ಬರದಿರಲಿ ಎಂದು ವಿಎಚ್ ಪಿ ವತಿಯಿಂದ ರಾಮತಾರಕ ಹೋಮ ಅಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸಚಿವರು ಅಯೋಧ್ಯೆಯ ರೀತಿಯಲ್ಲಿಯೇ ಕಾಶಿ ಹಾಗೂ ಮಥುರಾದಲ್ಲಿರುವ ಮಸೀದಿಗಳನ್ನು ಕೂಡ ಧ್ವಂಸ ಮಾಡಬೇಕಿದೆ ಎಂದರು.

ಕಾಶಿ ಹಾಗೂ ಮಥುರಾದಲ್ಲಿ ದೇವರ ದರ್ಶನಕ್ಕೆ ತೆರಳಿದರೆ ನಾವು ಗುಲಾಮರು ಎಂಬಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ ದೇವಾಲಯದ ಪಕ್ಕದಲ್ಲಿಯೇ ಮಸೀದಿ ಇರುವುದು. ಹೀಗಾಗಿ ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ. ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿ ತೆರವುಗೊಳಿಸಲಾಗಿದೆ. ಅದೇ ರೀತಿ ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳನ್ನು ತೆರವುಗೊಳಿಸುತ್ತೇವೆ. ಕಾಶಿ ಹಾಗೂ ಮಥುರಾದಲ್ಲಿ ಇಂದಲ್ಲ, ನಾಳೆ ಮಸೀದಿ ಧ್ವಂಸ ಆಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *