ಅಯೋಧ್ಯೆಯಲ್ಲಿ ಶಿಲಾನ್ಯಾಸ- ಉಡುಪಿಯಲ್ಲಿ ರಾಮ ದೇವರಿಗೆ ಲಕ್ಷ ತುಳಸಿ ಅರ್ಪಣೆ

Public TV
1 Min Read

ಉಡುಪಿ: ಐತಿಹಾಸಿಕ ರಾಮಮಂದಿರಕ್ಕೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆದಿದೆ. ದೇವಾಲಯಗಳ ನಗರಿ ಉಡುಪಿಯಲ್ಲಿ ಶಿಲಾನ್ಯಾಸ ದಿನ ಸಂಭ್ರಮಾಚರಣೆ ಮನೆಮಾಡಿತು. ರಾಮಮಂದಿರದ ಟ್ರಸ್ಟಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನೀಲಾವರದಲ್ಲಿ ರಾಮ ದೇವರಿಗೆ ಲಕ್ಷ ತುಳಸಿ ಅರ್ಪಿಸಿದರು.

ಪೇಜಾವರಶ್ರೀ ಚಾತುರ್ಮಾಸ್ಯದಲ್ಲಿ ಇರೋದ್ರಿಂದ ನೀಲಾವರ ಕೃಷ್ಣ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬೆಳಗ್ಗೆ 7ರಿಂದ ಹೋಮ ಹವನಾದಿ ಆರಂಭವಾಗಿದೆ.

ಕೆರೆಯ ನಡುವಿನ ದೇವಸ್ಥಾನದಲ್ಲಿ ಶ್ರೀ ರಾಮ ಲಕ್ಷ್ಮಣ ಸೀತೆ ಆಂಜನೇಯನ ವಿಗ್ರಹವನ್ನಿಟ್ಟು ಲಕ್ಷ ತುಳಸಿಯನ್ನು ದೇವರಿಗೆ ಅರ್ಪಿಸಿದರು. ರಾಮಮಂದಿರದ ಹೋರಾಟದಲ್ಲಿ ಇಡೀ ಜೀವನವನ್ನು ಸವೆಸಿದ ತನ್ನ ಹಿರಿಯ ಗುರುಗಳು ಬೃಂದಾವನಸ್ಥರಾದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಗೌರವವನ್ನು ಈ ಸಂದರ್ಭದಲ್ಲಿ ಅರ್ಪಿಸಿದರು. ನೀಲಾವರ ಗೋ ಶಾಲೆಯಲ್ಲಿ ರಾಮ ಮಂತ್ರ ಜಪ, ರಾಮ ಮಂತ್ರ ಹೋಮ, ವಿಷ್ಣುಸಹಸ್ರನಾಮ ಇತ್ಯಾದಿ ಪೂಜೆಗಳು ನಡೆದವು.

ಪೇಜಾವರ ಮಠದ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಇಂದು ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದಿದೆ. ಮಂದಿರ ಕಟ್ಟುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ತಮ್ಮ ತಮ್ಮ ಮನೆಗಳಲ್ಲಿ ರಾಮನಾಮ ತಾರಕ ಮಂತ್ರಗಳನ್ನು ಮಾಡಬೇಕು. ರಾಮ ಮಂದಿರ ಆದರೆ ಸಾಲದು ರಾಮರಾಜ್ಯ ನಿರ್ಮಾಣ ಮಾಡಬೇಕು. ಗುರುಗಳು ರಾಮಮಂದಿರಕ್ಕಾಗಿ ತನ್ನ ಜೀವನವನ್ನೇ ಸವೆಸಿದ್ದಾರೆ. ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ, ಅವರು ಎಲ್ಲೇ ಇದ್ದರೂ ಯಾವ ರೂಪದಲ್ಲಿದ್ದರೂ ಎಲ್ಲ ಕಾರ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂಬ ಭಾವನೆ ನಮ್ಮದು ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *