ಅಪ್ರಾಪ್ತೆ ಸೋದರಿಯನ್ನೇ ಕೊಂದ ಅಣ್ಣ- ಅರ್ಧ ತಿಂದ ಶವ ಪತ್ತೆ

Public TV
1 Min Read

– ಸ್ಥಳೀಯ ಯುವಕನೊಂದಿಗೆ 16ರ ಹುಡುಗಿ ಲವ್

ಮುಂಬೈ: ಸ್ಥಳೀಯ ಯುವಕನನ್ನು ಪ್ರೀತಿಸಿದ್ದಕ್ಕೆ 16 ವರ್ಷದ ಅಪ್ರಾಪ್ತೆಯನ್ನು ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ನಡೆದಿದೆ.

ಡೆಗ್ಲೂರ್ ತಾಲೂಕಿನ ಧಮಗಾಂವ್‍ನಲ್ಲಿ ಈ ಘಟನೆ ನಡೆದಿದ್ದು, ಮೃತಳನ್ನು ಕಲ್ಪನಾ ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿ ಅನಿಲ್ ಸೂರ್ಯವಂಶಿಯನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಕಲ್ಪನಾ ಸೂರ್ಯವಂಶಿ ಜೂನ್ 20 ರಂದು ನಾಪತ್ತೆಯಾಗಿದ್ದಳು. ಆದರೆ ಎರಡು ದಿನದ ನಂತರ ಜೂನ್ 22 ರಂದು ಆಕೆಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ನರಿಗಳು ಮತ್ತು ನಾಯಿಗಳು ಭಾಗಶಃ ತಿಂದಿದ್ದವು. ನಂತರ ನಾಂದೇಡ್ ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡಿದ್ದು, ಈ ಕೊಲೆಯನ್ನು ಮರ್ಯಾದಾ ಹತ್ಯೆಯ ಪ್ರಕರಣ ಎಂದು ಶಂಕಿಸಿದ್ದರು.

ಕಲ್ಪನಾ ಸೂರ್ಯವಂಶಿ ಮೃತದೇಹ ಪತ್ತೆಯಾದ ನಂತರ ಆಕೆಯ ತಾಯಿ ಸ್ಥಳೀಯ ಯುವಕನ ವಿರುದ್ಧ ಕೊಲೆ ಆರೋಪ ಮಾಡಿದ್ದರು. ನನ್ನ ಮಗಳು ಮತ್ತು ಯುವಕ ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ದರಿಂದ ಆತನೇ ಕೊಂದಿರಬೇಕು ಎಂದು ಆರೋಪಿಸಿದ್ದರು. ನಂತರ ಆಕೆಯ ಪ್ರಿಯಕರನನ್ನು ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು.

ಇತ್ತ ಮಗಳು ನಾಪತ್ತೆಯಾದರೂ ಕುಟುಂಬದವರು ದೂರು ದಾಖಲಿಸದ ಕಾರಣ ತನಿಖಾ ಅಧಿಕಾರಿಗಳು ಕುಟುಂಬದವರ ಮೇಲೆ ಅನುಮಾನಗೊಂಡಿದ್ದಾರೆ. ಈ ಕೊಲೆಯಲ್ಲಿ ಕುಟುಂಬದ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು.

ಕಲ್ಪನಾ ಅಂತ್ಯ ಸಂಸ್ಕಾರದ ನಂತರ ಪೊಲೀಸರು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದ ನಂತರ ಮೃತ ಹುಡುಗಿಯ ಸಹೋದರ ಅನಿಲ್ ಸೂರ್ಯವಂಶಿ (26) ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಲ್ಪನಾ ಸ್ಥಳೀಯ ಯುವಕನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರ ಸಂಬಂಧವನ್ನು ನಮ್ಮ ಕುಟುಂಬದವರು ವಿರೋಧಿಸಿದ್ದರು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಇದು ನಿಜಕ್ಕೂ ಮರ್ಯಾದಾ ಹತ್ಯೆ ಪ್ರಕರಣ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಜೂನ್ 30ರವರೆಗೂ ಪೊಲೀಸ್ ಕಸ್ಟಡಿಯಲ್ಲಿರುವಂತೆ ಆದೇಶಿಸಿದೆ ಎಂದು ಇನ್ಸ್ ಪೆಕ್ಟರ್ ದ್ವಾರಕದಾಸ್ ಚಿಖ್ಲಿಕರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *