ಅಪ್ಪ ಕರೆಯಲು ನಿರಾಕರಿಸಿದ 2ರ ಕಂದಮ್ಮನನ್ನು ಸಿಗರೇಟ್‍ನಿಂದ ಸುಟ್ಟ ಪೊಲೀಸ್

Public TV
1 Min Read

– ಸಾಲ ಪಡೆದಿದ್ದ ಮಹಿಳೆಯ ಮಗಳ ಮೇಲೆ ಕೃತ್ಯ

ರಾಯ್ಪುರ: 2 ವರ್ಷದ ಹೆಣ್ಣು ಮಗುವಿನ ಮೇಲೆ ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್ಸ್ ಸ್ಟೇಬಲ್ ಬಂಧಿಸಿ, ಸೇವೆಯಿಂದ ವಜಾ ಮಾಡಿದ ಘಟನೆ ಛತ್ತೀಸ್ ಗಢದ ಬಾಲೋಡ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಯನ್ನು ಅವಿನಾಶ್ ರೈ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಐಪಿಸಿ ಸೆಕ್ಷನ್ 323ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ ಆರೋಪಿಯನ್ನು ಭೈಲೈನ ಹೋಟೆಲಿನಿಂದ ಬಂಧಿಸಲಾಗಿದೆ. ಬಾಲಕಿಯ ಮೇಲೆ ಕೃತ್ಯ ಎಸಗಿದ ಬಳಿಕ ಆರೋಪಿ ಹೊಟೇಲಿನಲ್ಲಿ ತಲೆಮರೆಸಿಕೊಂಡಿದ್ದಾನೆ. ಸದ್ಯ ಆರೋಪಿ ಪೊಲೀಸ್ ಕಾನ್ಸ್ ಸ್ಟೇಬಲ್ ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಬಲೋಡ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಸಿಂಗ್ ಮೀನಾ ತಿಳಿಸಿದ್ದಾರೆ.

20 ದಿನಗಳ ಹಿಂದೆಯಷ್ಟೇ ವರ್ಗಾವಣೆಗೊಂಡಿದ್ದ ಅವಿನಾಶ್ ರೈ, ಸಂತ್ರಸ್ತೆಯ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದನು. ಬಾಲಕಿಯ ತಾಯಿ ಜಾನಪದ ಗಾಯಕಿ ಲಕ್ಷ್ಮಿ ನಂದ್ರೆ, ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಈತನಿಂದ ಹಣ ಪಡೆದಿದ್ದರು ಎಂದು ಮಿನಾ ಮಾಹಿತಿ ನೀಡಿದ್ದಾರೆ.

ಗುರುವಾರ ರಾತ್ರಿ ಸಾಲದ ಹಣವನ್ನು ವಾಪಸ್ ಪಡೆಯಲು ಬಾಲಕಿಯ ಮನೆಗೆ ರೈ ಕುಡಿದು ಬಂದಿದ್ದಾನೆ. ಈ ವೇಳೆ ಆತ ಮಗುವಿನ ಜೊತೆ ತನ್ನನ್ನು ಅಪ್ಪ ಕರೆಯುವಂತೆ ಕೇಳಿಕೊಂಡನು. ಆದರೆ ಬಾಲಕಿ ಇದನ್ನು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಆಕೆಯನ್ನು ನೇರವಾಗಿ ರೂಮಿಗೆ ಕರೆದೊಯ್ದು ನಿಂದಿಸಿದ್ದಾನೆ. ಅಲ್ಲದೆ ಆಕೆಯ ಮುಖ, ಹೊಟ್ಟೆ, ಬೆನ್ನು ಹಾಗೂ ಕೈಗಳಿಗೆ ಸಿಗರೇಟ್ ನಿಂದ ಸುಟ್ಟು ಗಾಯ ಮಾಡಿದ್ದಾನೆ.

ತನ್ನ ಮಗಳ ಮೇಲೆ ದೌರ್ಜನ್ಯವೆಸಗಿದ ವಿಚಾರ ಗಮನಕ್ಕೆ ಬಂದ ಕೂಡಲೇ ಮಹಿಳೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವೇಳೆ ರೈ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *