ಅನುಮತಿ ಪಡೆಯದೆ ಗಡ್ಡ ಬಿಟ್ಟಿದ್ದಕ್ಕೆ ಎಸ್‍ಐ ಅಮಾನತು

Public TV
2 Min Read

– ಗಡ್ಡ ತೆಗೆಯುವಂತೆ 3 ಬಾರಿ ವಾರ್ನಿಂಗ್

ಲಕ್ನೋ: ಅನುಮತಿ ಪಡೆಯದೆ ಗಡ್ಡ ಬಿಟ್ಟಿದ್ದಕ್ಕೆ ಉತ್ತರ ಪ್ರದೇಶದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್‍ನನ್ನು ಅಮಾನತುಗೊಳಿಸಿ, ಪೊಲೀಸ್ ಲೈನ್ ಗೆ ಕಳುಹಿಸಲಾಗಿದೆ.

ಪೊಲೀಸ್ ಇನ್‍ಸ್ಪೆಕ್ಟರ್ ಇಂಟೆಸರ್ ಅಲಿ ಅವರಿಗೆ ಈ ಹಿಂದೆ ಮೂರು ಬಾರಿ ಎಚ್ಚರಿಕೆ ನೀಡಲಾಗಿದ್ದು, ಗಡ್ಡವನ್ನು ತೆಗೆಯಿರಿ ಇಲ್ಲವೆ ಅನುಮತಿ ಪಡೆಯಿರಿ ಎಂದು ತಿಳಿಸಲಾಗಿದೆ. ಆದರೆ ಅಲಿ ಯಾವುದೇ ರೀತಿಯ ಅನುಮತಿ ಪಡಡೆದಿಲ್ಲ. ಅಲ್ಲದೆ ಗಡ್ಡವನ್ನು ಸಹ ತೆಗೆದಿಲ್ಲ.

ಘಟನೆ ಕುರಿತು ಎಸ್.ಪಿ.ಬಾಘ್ಪತ್ ಅಭಿಷೇಕ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅನುಮತಿ ಪಡೆದು ಗಡ್ಡವನ್ನು ಬಿಡಬಹುದು. ಯಾವುದೇ ಪೊಲೀಸ್ ಅಧಿಕಾರಿ ಗಡ್ಡ ಬಿಡಬೇಕೆಂದರೆ ಇದೇ ರೀತಿ ಅನುಮತಿ ಪಡೆಯಬೇಕು. ಇಂಟೆಸರ್ ಅಲಿ ಅವರಿಗೆ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಅನುಮತಿ ಪಡೆಯಿತಿ ಇಲ್ಲವೇ ಗಡ್ಡ ತೆಗೆಯಿರಿ ಎಂದು ಹೇಳಲಾಗಿತ್ತು. ಆದರೆ ಅಲಿ ಅನುಮತಿ ಪಡೆಯದೆ ಗಡ್ಡವನ್ನು ಬಿಟ್ಟಿದ್ದ ಎಂದು ತಿಳಿಸಿದ್ದಾರೆ.

ಈ ಕುರಿತು ಇತ್ತೀಚೆಗೆ ಅವರಿಗೆ ಶೋಕಾಸ್ ನೋಟಿಸ್ ಸಹ ನೀಡಲಾಗಿತ್ತು. ಇದಕ್ಕೂ ಉತ್ತರಿಸಿರಲಿಲ್ಲ. ಎಸ್‍ಐ ಅಲಿ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಅಮಾನತುಗೊಳಿಸಲಾಗಿದೆ. ಅಲ್ಲದೆ ಪ್ರಕರಣದ ಕರಿತು ತನಿಖೆಗೆ ಸಹ ಆದೇಶಿಸಲಾಗಿದೆ ಎಂದು ವಿವರಿಸಿದರು.

ಈ ಕುರಿತು ಅಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಗಡ್ಡ ಬಿಡಲು ಅನುಮತಿ ನೀಡುವಂತೆ ಕೋರಿ ನಾನು ಅರ್ಜಿ ಸಲ್ಲಿಸಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಪೊಲೀಸ್ ಕೈಪಿಡಿಯ ಪ್ರಕಾರ ಸಿಖ್ಖರು ಮಾತ್ರ ಗಡ್ಡ ಬಿಡಲು ಅನುಮತಿ ನೀಡಲಾಗಿದೆ. ಉಳಿದಂತೆ ಗಡ್ಡ ಬಿಡಲು ಎಲ್ಲ ಪೊಲೀಸ್ ಅಧಿಕಾರಿಗಳು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಈ ಮಧ್ಯೆ ಕೆಲವು ಮುಸ್ಲಿಂ ಸಂಘಟನೆಗಳು ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ಇತ್ತಿಹಾದ್ ಉಲಮಾ-ಇ-ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಖರಿ ಮುಸ್ತಫಾ ದೆಹಲ್ವಿ ಈ ಕುರಿತು ಪ್ರತಿಕ್ರಿಯಿಸಿ ಸಿಖ್ಖರಿಗೆ ಗಡ್ಡ ಬಿಡಲು ಅನುಮತಿ ನೀಡಲಾಗಿದೆ. ಆದರೆ ಮುಸ್ಲಿಮರಿಗೆ ಯಾಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲಿ ಸಬ್ ಇನ್‍ಸ್ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ಬಾಘ್ಪತ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *