ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ- ಮಾಲೀಕನ ವಿರುದ್ಧ ಪ್ರಕರಣ ದಾಖಲು

Public TV
1 Min Read

– ಬೆಂಗಳೂರು ಮೂಲದ ಐವರು ವಿದ್ಯಾರ್ಥಿಗಳು ವಾಸ್ತವ್ಯ

ಮಡಿಕೇರಿ: ಅನಧಿಕೃತ ಹೋಮ್ ಸ್ಟೇಗಳನ್ನು ತೆರೆಯದಂತೆ ಆದೇಶವಿದ್ದರೂ, ನಿಯಮ ಉಲ್ಲಂಘಿಸಿ ಹೋಮ್ ಸ್ಟೇ ತೆರೆದು ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಹೋಮ್ ಸ್ಟೇ ಮೇಲೆ ಪ್ರವಾಸೋದ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ವಶಪಡಿಸಿಕೊಂಡಿದ್ದಾರೆ.

ನಗರದ ಚಾಮುಂಡೇಶ್ವರಿ ನಗರದಲ್ಲಿರುವ ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದು, ಬೆಂಗಳೂರು ಮೂಲದ ಐವರು ವಿದ್ಯಾರ್ಥಿಗಳು ಹೋಮ್ ಸ್ಟೇಯಲ್ಲಿ ಆಶ್ರಯ ಪಡೆದಿದ್ದು, ಗುರುವಾರ ಜಿಲ್ಲೆಗೆ ಆಗಮಿಸಿದ್ದರು ಎನ್ನಲಾಗಿದೆ. ಹರೀಶ್ ಅವರಿಗೆ ಸೇರಿದ ಮನೆಯನ್ನು ಕಲಂದರ್ ಪಡೆದು ಹೋಮ್ ಸ್ಟೇ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಜೂ.8ರಿಂದ ಪ್ರವಾಸೋದ್ಯಮ ಪೂರಕ ಚಟುವಟಿಕೆಗಳಿಗೆ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ. ಕೇವಲ ನೋಂದಾಯಿತ 800 ಹೋಮ್ ಸ್ಟೇಗಳನ್ನು ಮಾತ್ರ ತೆರೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ನೋಂದಾಯಿಸದ ಹೋಮ್ ಸ್ಟೇಯಲ್ಲಿ ಪ್ರವಾಸಿಗರಿಗೆ ಆಶ್ರಯ ಕಲ್ಪಿಸಿದ್ದರು. ಜೊತೆಗೆ ಯಾವುದೇ ರೀತಿಯ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಹೋಮ್ ಸ್ಟೇಯನ್ನು ಸೀಜ್ ಮಾಡಿದ್ದಾರೆ.

ಈ ಸಂಬಂಧ ಮಡಿಕೇರಿ ನಗರ ಠಾಣೆಗೆ ಪ್ರವಾಸೋದ್ಯಮ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದ್ದು, ಹೋಮ್ ಸ್ಟೇ ಮಾಲೀಕನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನಧಿಕೃತ ಹೋಮ್ ಸ್ಟೇ ಬಂದ್ ಮಾಡಿ
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದನ್ನು ಕೊಡಗು ಜಿಲ್ಲಾ ಹೋಮ್ ಸ್ಟೇ ಅಸೋಸಿಯೇಶನ್ ಸ್ವಾಗತಿಸಿದೆ. ರಾಜಾ ಸೀಟ್ ಸುತ್ತಮುತ್ತ ಹಾಗೂ ಹಲವೆಡೆ, ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಅನಧಿಕೃತ ಹೋಮ್ ಸ್ಟೇಗಳು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದು, ಎಲ್ಲವನ್ನೂ ಮುಚ್ಚಿಸುವಂತೆ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ.ಅನಂತಶಯನ ಒತ್ತಾಯಿಸಿದ್ದಾರೆ. ಕೊರೊನಾ ಹರಡದಂತೆ ಮುಂಜಾಗೃತೆ ವಹಿಸದ ಎಲ್ಲರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *