ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್‍ಗೆ ಸಚಿವ ಸ್ಥಾನ ಸಿಕ್ಕಿಲ್ಲ: ಸಾರಾ ಮಹೇಶ್

Public TV
1 Min Read

– ಬಿಎಸ್‍ವೈ ಟೀಕಿಸುವ ಸಣ್ಣ ನೈತಿಕತೆಯೂ ಅವರಿಗಿಲ್ಲ

ಚಾಮರಾಜನಗರ: ಅಧಿದೇವತೆ ಶಾಪ, ನ್ಯಾಯ ದೇವತೆ ತೀರ್ಪಿನಿಂದ ವಿಶ್ವನಾಥ್ ಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸಿಎಂ ಯಡಿಯೂರಪ್ಪ ಟೀಕಿಸುವ ಸಣ್ಣ ನೈತಿಕತೆಯೂ ಇವರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೆಸರು ಹೇಳದೆ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂವಿಧಾನಿಕ ಸ್ಥಾನ ಹೊಂದಬಾರದು ಎಂಬ ಹೈಕೋರ್ಟ್ ತೀರ್ಪಿದ್ದರೂ ನೀವು ಪರಿಷತ್ ಸದಸ್ಯರಾಗಿರೋದು ತಪ್ಪು. ವಿಶ್ವನಾಥ್ ಅವರನ್ನು ನಲವತ್ತು ವರ್ಷ ಕಾಂಗ್ರೆಸ್ ಮದ್ವೆಯಾಗಿತ್ತು. ನಾವು ಕೂಡುವಳಿ ಮಾಡ್ಕೊಂಡಿದ್ವಿ, ನೀವು ದಿನದ ವ್ಯಾಪಾರಕ್ಕೆ ತೆಗೆದುಕೊಂಡಿದ್ದೀರಿ, ನಿಮ್ಮ ಕತೆ ಏನಾಗುತ್ತೋ ಎಂದು ಆಗಲೇ ಬಿಜೆಪಿಗೆ ಎಚ್ಚರಿಸಿದ್ದೆ ಎಂದು ಪರೋಕ್ಷವಾಗಿ ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ ಅನ್ನೋದು ರಾಜ್ಯದ ಜನತೆಗೆ ಗೊತ್ತಾಗಿದೆ. ರಾಜಕೀಯವಾಗಿ ಮೂಲೆಗುಂಪಾಗಿದ್ದ ವ್ಯಕ್ತಿಯನ್ನು ತನು, ಮನ, ಧನ ನೀಡಿ ಆಶ್ರಯ ಕೊಟ್ಟ ಜೆಡಿಎಸ್ ಗೆ ದ್ರೋಹ ಮಾಡಿದ್ದೀರಿ. ಜೆಡಿಎಸ್ ಕಾರ್ಯಕರ್ತರ ನಿಟ್ಟುಸಿರು ನಿಮ್ಮನ್ನ ಸುಮ್ಮನೆ ಬಿಡುತ್ತಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಮಾತಿಗೆ ತಪ್ಪಿದವರೆಂದು ಹೇಳಲು ಇವರಿಗೆ ನೈತಿಕತೆ ಇಲ್ಲ. ಬಿಜೆಪಿಗೆ ಹೋಗಿದ್ದ ಹದಿನೇಳು ಜನರಲ್ಲಿ ಹದಿನಾರು ಜನರಿಗೆ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಹೈಕೋರ್ಟ್ ತೀರ್ಪಿಗಿಂತ ಯಡಿಯೂರಪ್ಪ ದೊಡ್ಡವರಲ್ಲ. ಅಧಿಕಾರ ಇಲ್ಲದೇ ನಾನೂ ಬಿಜೆಪಿಯಲ್ಲಿ ಬಿಎಸ್‍ವೈ ಅವರೊಂದಿಗೆ ಬಾವುಟ ಕಟ್ಟಿದ್ದೇನೆ. ಅಲ್ಲೇನು ನಡೆಯುತ್ತೆ ನನಗೂ ಗೊತ್ತು ಎಂದು ಹೇಳಿದರು.

ನನ್ನ ಉಸಿರು ಇರೋ ತನಕ ಅವರ ಹೆಸರು ಹೇಳಲ್ಲ, ಅದಕ್ಕೇ ಪರೋಕ್ಷವಾಗಿ ಟೀಕೆ ಮಾಡಿದ್ದೇನೆ. ದೇವೇಗೌಡರು ದೇವರಾದರೆ, ಕುಮಾರಸ್ವಾಮಿ ರಾಕ್ಷಸರಾಗಿ ಬಿಟ್ಟರೆ ಎಂದು ಪ್ರಶ್ನಿಸಿದ ಅವರು, ಹುಣಸೂರು ಉಪ ಚುನಾವಣೆಯಲ್ಲಿ ಬಿಜೆಪಿ ದುಡ್ಡು ಕೊಟ್ಟಿರಲಿಲ್ಲವಾ, ವಿಶ್ವನಾಥ್ ಒಬ್ಬ ದುರಂತ ನಾಯಕ ಎಂದು ಕುಟುಕಿದರು.

Share This Article
Leave a Comment

Leave a Reply

Your email address will not be published. Required fields are marked *