ಅಧಿಕಾರ ಸ್ವೀಕರಿಸಿದ ಎರಡೂವರೆ ಗಂಟೆಯಲ್ಲಿ ರಾಜೀನಾಮೆ – ನಿತೀಶ್ ಕುಮಾರ್ ಸಂಪುಟದಲ್ಲಿ ಸಂಚಲನ

Public TV
2 Min Read

ಪಾಟ್ನಾ: ಅಧಿಕಾರ ಸ್ವೀಕರಿಸಿದ ಎರಡೂವರೆ ಗಂಟೆಯಲ್ಲಿಯೇ ತಮ್ಮ ಶಿಕ್ಷಣ ಸಚಿವ ಸ್ಥಾನಕ್ಕೆ ಮೇವಾಲಾಲ್ ಚೌಧರಿ ರಾಜೀನಾಮೆ ನಿಡಿದ್ದಾರೆ. ನವೆಂಬರ್ 16ರಂದು ಮೇವಾಲಾಲ್ ಚೌಧರಿ ಪ್ರಮಾಣ ವಚನ ಸ್ವೀಕರಿಸಿ ನಿತೀಶ್ ಕುಮಾರ್ ಸಂಪುಟ ಸೇರ್ಪಡೆಯಾಗಿದ್ದರು.

 

ಸಚಿವ ಸ್ಥಾನ ಹಂಚಿಕೆಯಾದ ಬೆನ್ನಲ್ಲೇ ಮೇವಾಲಾಲ್ ಚೌಧರಿ ಇಂದು ಮಧ್ಯಾಹ್ನ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರಿ ಸ್ವೀಕರಿಸಿದ ಎರಡೂವರೆ ಗಂಟೆಯಲ್ಲಿಯೇ ಮೇವಾಲಾಲ್ ಚೌಧರಿ ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದಾರೆ. ಇದೀಗ ಮೇವಾಲಾಲ್ ಚೌಧರಿ ಅವರ ಇಲಾಖೆಯನ್ನ ಅಶೋಕ್ ಚೌಧರಿ ನೋಡಿಕೊಳ್ಳಲ್ಲಿದ್ದಾರೆ.

ಮೇವಾಲಾಲ್ ಚೌಧರಿ ಅವರನ್ನ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಿತೀಶ್ ಕುಮಾರ್ ಆರಂಭದಲ್ಲಿ ಒಪ್ಪಿರಲಿಲ್ಲ. ವಿಜಯ್ ಕುಮಾರ್ ಚೌಧರಿ ಮತ್ತು ಅಶೋಕ್ ಚೌಧರಿ ಮಂತ್ರಿಗಳಾಗುವುದು ಖಚಿತವಾಗಿತ್ತು. ಕೊನೆ ಕ್ಷಣದಲ್ಲಿ ಮೇವಾಲಾಲ್ ಚೌಧರಿ ಸಂಪುಟ ಸೇರ್ಪಡೆಯಾಗುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದರು.

ಭ್ರಷ್ಟಾಚಾರದ ಆರೋಪ: 2010ರಲ್ಲಿ ಬಿಹಾರ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಮೇವಾಲಾಲ್ ಚೌಧರಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ನೇಮಕಾತಿ ವೇಳೆ ಭ್ರಷ್ಟಾಚಾರ ನಡೆದಿರುವ ಬಗ್ಗೆ ಪ್ರತಿಭಟನೆಗಳು ಸಹ ನಡೆದಿದ್ದವು. ಈ ಹಿನ್ನೆಲೆ ಮೇವಾಲಾಲ್ ಚೌಧರಿ ರಾಜೀನಾಮೆ ನೀಡಿದ್ದಾರೆ.

ಸಚಿವ ಸ್ಥಾನ ನಿರ್ವಹಣೆ: ಶಿಕ್ಷಣ ಇಲಾಖೆ ಮೇವಾಲಾಲ್ ಅವರಿಗೆ ಹಂಚಿಕೆ ಆಗುತ್ತಲೇ ಜೆಡಿಯು ನಲ್ಲಿಯೇ ಕೆಲ ಚರ್ಚೆಗಳು ಆರಂಭಗೊಂಡಿದ್ದವು. ಶಿಕ್ಷಣ ಇಲಾಖೆಯನ್ನ ಮೇವಾಲಾಲ್ ನಿಭಾಯಿಸ್ತಾರೆ ಎಂಬಿತ್ಯಾದಿ ಬಿಸಿ ಬಿಸಿ ಚರ್ಚೆಗಳು ನಡೆದಿದ್ದವು. ಚರ್ಚೆಯ ಬೆನ್ನಲ್ಲೇ ಜೆಡಿಯು ರಾಜ್ಯಾಧ್ಯಕ್ಷ ನಾರಾಯಣ್ ಸಿಂಗ್ ಸಿಎಂ ನಿತೀಶ್ ಕುಮಾರ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮೇವಾಲಾಲ್ ರಾಜೀನಾಮೆ ಬಳಿಕ ನಿತೀಶ್ ಕುಮಾರ್ ಭ್ರಷ್ಟಾಚಾರದ ಜೊತೆ ರಾಜಿ ಮಾಡಿಕೊಳ್ಳಲ್ಲ ಎಂಬ ಮಾತುಗಳು ಜೆಡಿಯು ಅಂಗಳದಲ್ಲಿ ಕೇಳಿ ಬರುತ್ತಿವೆ.

ಮಾನಹಾನಿ ಕೇಸ್: ಅಧಿಕಾರ ಸ್ವೀಕಾರ ವೇಳೆ ಮಾತನಾಡಿದ್ದ ಮೇವಾಲಾಲ್ ಚೌಧರಿ, ನನ್ನ ವಿರುದ್ಧ ಯಾವುದೇ ಚಾರ್ಜ್ ಶೀಟ್ ಆಗಿಲ್ಲ. ನನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಅವರೆಲ್ಲರ ವಿರುದ್ಧ 50 ಕೋಟಿ ರೂ. ಮಾನಹಾನಿ ಕೇಸ್ ದಾಖಲಿಸುತ್ತೇನೆ ಎಂದು ಗುಡುಗಿದ್ದರು. ಇದೀಗ ರಾಜೀನಾಮೆ ಬಳಿಕ ಮೇವಾಲಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಪ್ಪೊಪ್ಪಿಕೊಂಡಿದ್ದ ಮೇವಾಲಾಲ್: ನೇಮಕಾತಿ ಪ್ರಕ್ರಿಯೆ ವೇಳೆ ಅವ್ಯವಹಾರ ನಡೆದಿರೋದರ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎಸ್‍ಎಂಎಸ್ ಆಲಂ ನೇತೃತ್ವದ ತನಿಖಾ ತಂಡದ ಮುಂದೆ ತಪ್ಪೊಪ್ಪಿಕೊಂಡಿದ್ದರು ಎಂದು ವರದಿಯಾಗಿತ್ತು. ನೇಮಕಾತಿ ವೇಳೆ ರಿಮಾರ್ಕ್, ಮೌಖಿಕ ಅಂಕ ಮತ್ತು ಶೇಕಡಾವರು ಶ್ರೇಣಿಯನ್ನ ಭರ್ತಿ ಮಾಡಿರೋದಗಿ ಮೇವಾಲಾಲ್ ಹೇಳಿಕೆ ದಾಖಲಿಸಿದ್ದರು. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ 30 ಅಭ್ಯರ್ಥಿಗಳು ದೂರು ಸಲ್ಲಿಸಿದ್ದಾಗ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *