ಅಧಿಕಾರ, ಅವಕಾಶ ಎಲ್ಲಾ ಕೊಟ್ವಿ ಎಂಜಾಯ್ ಮಾಡಿ ದ್ರೋಹ ಬಗೆದ್ರು: ಡಿಸಿ ತಮ್ಮಣ್ಣ

Public TV
1 Min Read

ಬೆಂಗಳೂರು: ಅಧಿಕಾರ, ಅವಕಾಶ ಎಲ್ಲಾ ಕೊಟ್ಟಿದ್ದೇವೆ. ಅದನ್ನು ಎಂಜಾಯ್ ಮಾಡಿ ಈಗ ದ್ರೋಹ ಮಾಡಿದರು ಎಂದು ಸಚಿವ ಡಿ.ಸಿ.ತಮ್ಮಣ್ಣ ಅವರು, ರಾಜೀನಾಮೆ ನೀಡಿದ ಪಕ್ಷದ ಶಾಸಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಭದ್ರವಾಗಿದೆ ಎನ್ನುವುದು ಗೊತ್ತಿಲ್ಲ. ಶಾಸಕ ಗೋಪಾಲಯ್ಯ ದ್ರೋಹ ಮಾಡಿದ್ದಾರೆ. ಈ ಹಿಂದೆ ಕ್ರಾಸ್ ವೋಟ್ ಮಾಡಿದಾಗ ಸರಿಯಾದ ಸಮಯಕ್ಕೆ ಬರಲಿಲ್ಲ. ಆಗ ಕ್ಷಮಿಸಿ ಅಧಿಕಾರ ಕೊಡಲಾಯಿತು. ಆದರೆ ಈಗ ಪಕ್ಷವು ಮತ್ತೆ ಪಶ್ಚಾತ್ತಾಪ ಪಡುವಂತೆ ಮಾಡಿದರು ಎಂದು ಕಿಡಿಕಾರಿದರು.

ಜನರಿಗೆ ಉತ್ತಮ ನಾಯಕರ ಆಯ್ಕೆ ಮಾಡಬೇಕು. ಪಕ್ಷಕ್ಕೆ ದ್ರೋಹ ಮಾಡುವವರನ್ನು ದೂರ ಇಡಬೇಕು. ಜೆಡಿಎಸ್ ಚಿಹ್ನೆ ಮೇಲೆ ಗೆಲುವು ಸಾಧಿಸಿದವರು ಪಕ್ಷಕ್ಕೆ ನಿಷ್ಠೆಯಿಂದ ಇರಬೇಕು. ಹೀಗೆ ಅಧಿಕಾರಕ್ಕಾಗಿ ಪಕ್ಷವನ್ನು ನಡು ನೀರಿನಲ್ಲಿ ಕೈ ಬಿಡಬಾರದು ಎಂದು ಗುಡುಗಿದರು.

ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರು ರಾಜೀನಾಮೆ ಹಿಂದಿನ ದಿನ ಬಂದು ಎಲ್ಲಿಯೂ ಹೋಗಲ್ಲ ಅಣ್ಣ ಅಂತ ಹೇಳಿದ್ದರು. ಈಗ ಹೀಗೆ ಮಾಡಿದ್ದಾರೆ. ಅವರ ನಡೆಯಿಂದ ಪಕ್ಷಕ್ಕೆ ಬಹಳ ಬೇಜಾರಾಗಿದೆ ಎಂದರು.

ಶಾಸಕರನ್ನು ರೆಸಾರ್ಟಿಗೆ ಕಳುಹಿಸುವ ವಿಚಾರವಾಗಿ ಮಾತನಾಡಿದ ಸಚಿವರು, ಹೀಗೆ ಮಾಡುವುದರಿಂದ ಹೊಸ ಶಾಸಕರು ಬೇಸರವಾಗುತ್ತಾರೆ. ಆದರೆ ಅವರ ಮನವೊಲಿಕೆಗೆ ಒಂದು ದಿನ ನಾನು ಹೋಗುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *