ಅದ್ಧೂರಿಯಲ್ಲದಿದ್ದರೂ, ಭರ್ಜರಿಯಾಗಿ ಗಣೇಶ ಹಬ್ಬ ಆಚರಿಸೋಣ – ರಾಖಿಭಾಯ್

Public TV
2 Min Read

ಬೆಂಗಳೂರು: ಈ ಬಾರಿಯ ಗಣೇಶ ಹಬ್ಬವನ್ನು ಅಷ್ಟೇನು ಭವ್ಯವಾಗಿ ಆಚರಿಸದಿರಬಹುದು. ಆದರೆ ನಮ್ಮಲ್ಲಿನ ಆಚರಣೆ, ಭಕ್ತಿಗೆ ಅಡ್ಡಿಯಾಗುವುದಿಲ್ಲ. ನಮ್ಮ ಮನಗಳಲ್ಲೇ ಅದ್ಧೂರಿಯಾಗಿ ಹಬ್ಬ ಆಚರಿಸೋಣ ಎಂದು ಹೇಳುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಗಣೇಶ ಹಬ್ಬಕ್ಕೆ ಶುಭ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಬಾರಿಯ ನಮ್ಮ ಆಚರಣೆಗಳು ಪ್ರತಿ ವರ್ಷದಂತೆ ಅದ್ಧೂರಿಯಾಗಿಲ್ಲ. ಆದರೆ ಈ ಬಾರಿಯ ಗೌರಿ ಗಣೇಶ ಚತುರ್ಥಿ ನಿಮ್ಮೆಲ್ಲರಿಗೆ ಸಂತೋಷ, ಉತ್ತಮ ಆರೋಗ್ಯ, ಸಮೃದ್ಧಿಯನ್ನು ತಂದುಕೊಡಲಿ. ಮೋದಕಗಳನ್ನು ಸವಿದು ಸಂಭ್ರಮದಿಂದ ಹಬ್ಬವನ್ನು ಆಚರಿಸಿ ಎಂದು ಶುಭ ಕೋರಿದ್ದಾರೆ.

ಕೊರೊನಾದಿಂದಾಗಿ ಲಾಕ್‍ಡೌನ್ ಆದಾಗಿನಿಂದ ಯಶ್ ಮನೆಯಲ್ಲೇ ಕಾಲ ಕಳೆಯುತ್ತಿದ್ದರು. ಮಕ್ಕಳೊಂದಿಗೆ ಆಟವಾಡುತ್ತ ಸಮಯ ದೂಡುತ್ತಿದ್ದರು. ಸರ್ಕಾರ ಚಿತ್ರೀಕರಣಕ್ಕೆ ಅವಕಾಶ ನೀಡಿದರೂ ಕೆಜಿಎಫ್-2 ಸಿನಿಮಾ ಕೆಲಸಗಳನ್ನು ಆರಂಭಿಸಿರಲಿಲ್ಲ. ಆದರೆ ಆಗಸ್ಟ್ 20ರಿಂದ ಚಿತ್ರೀಕರಣ ಆರಂಭವಾದ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಈ ಮೂಲಕ ಚಿತ್ರೀಕರಣ ಆರಂಭವಾಗಿರುವ ಸುಳಿವು ನೀಡಿದ್ದಾರೆ.

ಶೂಟಿಂಗ್ ಆರಂಭವಾಗಿರುವ ಕುರಿತು ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್, ಲೆಟ್ಸ್ ಗೆಟ್ ಇಟ್ ಡನ್ ಎಂದು ಬರೆದು ಹ್ಯಾಶ್ ಟ್ಯಾಗ್‍ನೊಂದಿಗೆ ಕೆಜಿಎಫ್ ಚಾಪ್ಟರ್ 2 ಎಂದು ಹಾಕಿದ್ದಾರೆ. ಕೆಜಿಎಫ್-2 ಚಿತ್ರೀಕರಣ ಅಂತಿಮ ಹಂತ ತಲುಪಿದೆ ಎನ್ನಲಾಗಿದ್ದು, ಆದಷ್ಟು ಬೇಗ ತೆರೆಗೆ ಬರಲು ಸಿದ್ಧತೆ ನಡೆಸಲಾಗುತ್ತಿದೆ.

ಕೆಜಿಎಫ್-1 ಧೂಳೆಬ್ಬಿಸಿದ ಬಳಿಕ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು, ದೇಶ ವಿದೇಶಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಚಿತ್ರ ತಂಡ ಸೇರಿರುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *