ಅದ್ದೂರಿ ಬ್ರಹ್ಮೋತ್ಸವಕ್ಕೆ ಬ್ರೇಕ್- ಮೇಲುಕೋಟೆಯವ್ರು ಹೊರತುಪಡಿಸಿ ಬೇರೆಯವ್ರಿಗೆ ಇಲ್ಲ ಅವಕಾಶ

Public TV
2 Min Read

– ಕೋವಿಡ್ ಟೆಸ್ಟ್ ಮಾಡಿಸಿಕೊಂಡವರಿಗೆ ಮಾತ್ರ ಅವಕಾಶ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಪ್ರತಿ ವರ್ಷ ಜರುಗುವ ಶ್ರೀ ಚಲುವನಾರಾಯಣಸ್ವಾಮಿಯ ಐತಿಹಾಸಿಕ ಪುರಾಣ ಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವಕ್ಕೆ ಕೊರೊನಾದ ಕರಿ ನೆರಳು ಈ ಬಾರಿಯೂ ಬಿದ್ದಿದೆ. ಕೊರೊನಾ ಹಿನ್ನೆಲೆ ಈ ಬಾರಿ ವೈರಮುಡಿ ಬ್ರಹ್ಮೋತ್ಸವ ಸರಳವಾಗಿ ಆಚರಣೆ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಮೇಲುಕೋಟೆಯ ಪುರಾಣ ಪ್ರಸಿದ್ಧ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ವೈರಮುಡಿ ಬ್ರಹ್ಮೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತಿತ್ತು. ಕಳೆದ ವರ್ಷ ಕೊರೊನಾ ಅಟ್ಟಹಾಸದಿಂದ ವೈರಮುಡಿ ಬ್ರಹ್ಮೋತ್ಸವಕ್ಕೆ ಬ್ರೇಕ್ ಹಾಕಲಾಗಿತ್ತು. ಇದರಿಂದ ಲಕ್ಷಾಂತರ ಭಕ್ತರಲ್ಲಿ ಬೇಸರ ಉಂಟಾಗಿತ್ತು. ಇದೀಗ ಮತ್ತೆ ಕೊರೊನಾ ಅಟ್ಟಹಾಸ ಹೆಚ್ಚಿರುವ ಹಿನ್ನೆಲೆ ಈ ಬಾರಿ ಮಾರ್ಚ್ 19 ರಿಂದ 24ರವಗೆ ಜರುಗುವ ಅದ್ದೂರಿ ವೈರಮುಡಿ ಬ್ರಹ್ಮೋತ್ಸವಕ್ಕೆ ಬ್ರೇಕ್ ಹಾಕಲಾಗಿದೆ. ವೈರಮುಡಿ ಬ್ರಹ್ಮೋತ್ಸವವನ್ನು ಸರಳವಾಗಿ ಆಚರಣೆ ಮಾಡಲು ಮಂಡ್ಯ ಜಿಲ್ಲಾಡಳಿತ ನಿರ್ಧಾರ ಮಾಡಿದ್ದು, ಮೇಲುಕೋಟೆಯ ಜನರನ್ನು ಹೊರತುಪಡಿಸಿ ಅಂತರರಾಜ್ಯ ಹಾಗೂ ಇತರ ಜಿಲ್ಲೆಯ ಜನರು ಆಗಮಿಸುವುದನ್ನು ನಿಷೇಧ ಮಾಡಲಾಗಿದೆ.

ವೈರಮುಡಿ ಬ್ರಹ್ಮೋತ್ಸವದ ವೇಳೆ ದೇವಸ್ಥಾನದ ಒಳ ಭಾಗದಲ್ಲಿ ಕೇವಲ 100 ಮಂದಿ ಮಾತ್ರ ಇರಬೇಕು ಹಾಗೂ ದೇವಸ್ಥಾನದ ಹೊರ ಭಾಗದಲ್ಲಿ 2000 ಮಂದಿ ಮಾತ್ರ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ವೈರಮುಡಿ ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರನ್ನೂ ಕೋವಿಡ್ ಟೆಸ್ಟ್ ಮಾಡಿ ಸೀಲ್ ಹಾಕಿ ಕಳಿಸಲಾಗುತ್ತದೆ. ಬೇರೆ ರಾಜ್ಯದಿಂದ ಬಂದವರನ್ನೂ ಗಡಿಯಲ್ಲೇ ತಡೆದು ಹೊರಗೆ ಕಳಿಸಲಾಗುತ್ತದೆ. ಪ್ರತಿ ವರ್ಷ ವೈರಮುಡಿ ಬ್ರಹ್ಮೋತ್ಸವ ಸಂಜೆಯಿಂದ ಬೆಳಗ್ಗಿನ ಜಾವ 4 ಗಂಟೆಯವರೆಗೆ ಜರುತ್ತಿತ್ತು. ಆದರೆ ಈ ಬಾರಿ ಸಂಜೆಯಿಂದ ಮಧ್ಯರಾತ್ರಿ 12 ಗಂಟೆಯವರಗೆ ಮಾತ್ರ ಜರುಗಲಿದೆ. ಕಳೆದ ಬಾರಿ ವೈರಮುಡಿ ಬ್ರಹ್ಮೋತ್ಸವ ಆಚರಣೆ ಮಾಡದ ಕಾರಣ ಈ ಬಾರಿ ಪ್ರಾಶ್ಚಿತ ಉತ್ಸವ ಮಾಡಿ ಈ ಬಾರಿ ವೈರಮುಡಿ ಬ್ರಹ್ಮೋತ್ಸವವನ್ನು ಆಚರಣೆ ಮಾಡಲಾಗುತ್ತದೆ.

ಇಷ್ಟು ವರ್ಷ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ಆಚರಣೆಯಾಗುತ್ತಿದ್ದು, ಭಕ್ತರು ಈ ಉತ್ಸವವನ್ನು ಕಣ್ತುಂಬಿಕೊಂಡು ಪುನೀತರಾಗುತ್ತಿದ್ದರು. ಆದ್ರೆ ಇದೀಗ ಕೊರೊನಾ ಕರಿನೆರಳಿನಿಂದ ಅದ್ದೂರಿ ಉತ್ಸವಕ್ಕೆ ಬ್ರೇಕ್ ಬಿದ್ದಿರುವುದರಿಂದ ಭಕ್ತರಲ್ಲಿ ನಿರಾಸೆ ಉಂಟಾಗಿದೆ.

Share This Article
Leave a Comment

Leave a Reply

Your email address will not be published. Required fields are marked *