ಅತ್ತಿಗೆಯ ಸೀಮಂತದ ಬೆನ್ನಲ್ಲೇ ಅಭಿಮಾನಿಗಳಲ್ಲಿ ಧ್ರುವ ಮನವಿ

Public TV
1 Min Read

ಬೆಂಗಳೂರು: ಕೊರೊನಾ ಕಾರಣದಿಂದ ಸ್ಯಾಂಡಲ್‍ವುಡ್‍ನ ಅನೇಕರು ತಮ್ಮ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಇದೀಗ ನಟ ಧ್ರುವ ಸರ್ಜಾ ಅಹ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡ ಎಂದಿದ್ದಾರೆ. ಇದನ್ನೂ ಓದಿ: ಚಿರು ಫೋಟೋ ಇಟ್ಟು ಮೇಘನಾಗೆ ಸೀಮಂತ ಶಾಸ್ತ್ರ

ಅಕ್ಟೋಬರ್ 6 ರಂದು ಅಂದರೆ ನಾಳೆ ಧ್ರುವ ಸರ್ಜಾರ ಹುಟ್ಟುಹಬ್ಬ ಇದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಇಂದು ರಾತ್ರಿಯೇ ಮನೆಯ ಬಳಿ ಶುಭಾಶಯ ಕೋರಲು ಬರುತ್ತಾರೆ ಎಂದು ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ ಸರ್ಜಾ, “ಅಭಿಮಾನಿಗಳೇ ನಮ್ಮ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ, ಎಲ್ಲೂ ಸಂಭ್ರಮವಿಲ್ಲ. ಆದರೆ ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈ ಆಂಜನೇಯ” ಎಂದು ಬರೆದುಕೊಂಡಿದ್ದಾರೆ.

ಪ್ರತಿವರ್ಷ ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್ ಮಾಡಿಸಿಕೊಂಡು ಅವರ ಮನೆಯ ಬಳಿ ಜಮಾಯಿಸುತ್ತಿದ್ದರು. ಅಲ್ಲದೇ ಕೇಕ್ ಕಟ್ ಮಾಡಿಸಿ, ಹೂವಿನ ಮಾಲೆ ಹಾಕಿ ಸಂಭ್ರಮಿಸುತ್ತಿದ್ದರು. ಧ್ರುವ ಸರ್ಜಾ ಕೂಡ ಅಭಿಮಾನಿಗಳ ಜೊತೆ ಬರ್ತ್ ಡೇಯನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಅಭಿಮಾನಿಗಳನ್ನು ಮನೆಯ ಬಳಿ ಬರಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

ಭಾನುವಾರವಷ್ಟೇ ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *