ಅಕ್ಷಯ್ ಕುಮಾರ್ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಗೆ ಭೂಮಿ ಪೂಜೆ

Public TV
1 Min Read

ಶ್ರೀನಗರ: ಬಾಲಿವುಡ್ ನಟ ಅಕ್ಷಯ್ ಕುಮಾರ್ 1ಕೋಟಿ ರೂ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಪೂಜೆಯನ್ನು ನೆರವೇರಿಸಲಾಗಿದೆ.

ಅಕ್ಷಯ್ ಈ ಹಿಂದೆ ಬಿಎಸ್‍ಎಫ್‍ಗೆ ಭೇಟಿ ನೀಡಿದ್ದರ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ದೇಶದ ಗಡಿ ಕಾಯುವ ನೈಜ ಹೀರೋಗಳನ್ನು ನಾನಿಂದು ಭೇಟಿಯಾದೆ. ಗೌರವದ ಹೊರತಾಗಿ ಮತ್ಯಾವ ಭಾವವೂ ನನ್ನಲ್ಲಿ ಮೂಡುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದರು. ಆ ಸಂದರ್ಭದಲ್ಲಿಯೇ ಅವರು ಶಾಲೆಗೆ ದೇಣಿಗೆ ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಬಿಎಸ್‍ಎಫ್ ಶಾಲೆಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡಿರುವ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ.

 

ಗಡಿ ಭದ್ರತಾ ಪಡೆಯ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿಯಂತೆ, ಅಕ್ಷಯ್ ಕುಮಾರ್ ಅವರ ತಂದೆ ದಿವಂಗತ ಹರಿ ಓಂ ಭಾಟಿಯಾ ಅವರ ಸ್ಮರಣಾರ್ಥವಾಗಿ, ಕಾಶ್ಮೀರದ ನೀರುವಿನ ಸರ್ಕಾರಿ ಶಾಲೆಯ ಹೊಸ ಸಂಕೀರ್ಣಕ್ಕೆ ಅಡಿಪಾಯವನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು ವೆಬ್‍ಲಿಂಕ್ ಮೂಲಕ ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.

ಕೊರೊನಾ ಸಂದಿಗ್ಧ ಸಮಯದಲ್ಲಿ ಅವಶ್ಯವಿರುವವರಿಗೆ ಸಹಾಯ ಹಸ್ತ ಚಾಚಿದ್ದ ಈ ನಟ, ಈಗ ಶಿಕ್ಷಣ ಕ್ಷೇತ್ರದಲ್ಲೂ ನೆರವು ನೀಡಿದ್ದು ಗಮನ ಸೆಳೆದಿದೆ. ಅಕ್ಷಯ್ ಕುಮಾರ್ ಅವರು ಬಾಲಿವುಡ್‍ನಲ್ಲಿ ಮುಂಚೂಣಿಯಲ್ಲಿರುವ ನಟರಾಗಿದ್ದಾರೆ. ಬೆಲ್ ಬಾಟಂ, ಬಚ್ಚನ್ ಪಾಂಡೆ, ರಕ್ಷಾ ಬಂಧನ್, ರಾಮ ಸೇತು, ಪೃಥ್ವಿರಾಜ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *