ಅಕ್ರಮ ಗಣಿಗಾರಿಕೆಗೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಗೆ ತಂದಿದ್ದಕ್ಕೂ ಏನು ಸಂಬಂಧ: ಸುಮಲತಾ

Public TV
1 Min Read

ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೂ, ಮನ್‍ಮುಲ್‍ನ ಹಗರಣಕ್ಕೂ, ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ನಾವು ತಂದಿದ್ದಕ್ಕೂ, ಜೆಡಿಎಸ್ ನಾಯಕರ ಹೇಳಿಕೆಗೂ ಏನು ಸಂಬಂಧ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದ್ದಾರೆ.

ಮಂಡ್ಯದ ಗೆಜ್ಜಲಗೆರೆ ಬಳಿ ಮನ್‍ಮುಲ್ ಹಗರಣವನ್ನು ಸಿಬಿಐಗೆ ನೀಡುವಂತೆ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಸಂಸದೆ ಸುಮಲತಾ ಅಂಬರೀಶ್ ಅವರು ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ನಾನು ಏನು ಮಾತನಾಡಿದರು ಸಹ ರಾಜಕೀಯವಾಗಿ ತೆಗೆದುಕೊಳ್ಳುತ್ತಾರೆ. ನಾನು ಜಿಲ್ಲೆಯ ಅಕ್ರಮ ಗಣಿಗಾರಿಕೆ ಹಾಗೂ ಮನ್‍ಮುಲ್ ಹಗರಣದ ಬಗ್ಗೆ ಮಾತನಾಡಿದರೆ ಅವರು ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತಂದಿದ್ದು ನಾವು ಎಂದು ಹೇಳುತ್ತಾರೆ. ನಾನು ಹೇಳಿದ್ದಕ್ಕೂ ಇವರು ಹೇಳುತ್ತಿರುವುದಕ್ಕೂ ಏನು ಸಂಬಂಧ ಎಂದು ಪಶ್ನೆ ಮಾಡಿದರು. ಇದನ್ನೂ ಓದಿ: ಸುಮಲತಾ ಬೇಬಿ ಬೆಟ್ಟಕ್ಕೆ ಬನ್ನಿ ಅಂದ್ರೆ ಬರುತ್ತೇನೆ: ಪುಟ್ಟರಾಜು

ಸುಮಲತಾಗೆ ರಾಜಕೀಯ ಹೊಸದು ಅವರಿಗೆ ಮಾಹಿತಿ ಇಲ್ಲ ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ. ಹೌದು ನನಗೆ ರಾಜಕೀಯ ಹೊಸದು ಒಪ್ಪಿಕೊಳ್ಳುತ್ತೇನೆ. ಹಾಗೆಯೇ ಭ್ರಷ್ಟಾಚಾರನೂ ಸಹ ಹೊಸದೇ, ನಾನು ಸಿನಿಮಾದಿಂದ ಬಂದವಳು ನಿಜ. ಸಿನಿಮಾದಲ್ಲಿ ಭ್ರಷ್ಟಾಚಾರ ಎನ್ನೋದು ಇರಲಿಲ್ಲ, ಆದರೆ ಇಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಇದರ ಬಗ್ಗೆ ನಾನು ಮಾತನಾಡಿದರೆ ರಾಜಕೀಯವಾಗಿ ತೆಗೆದುಕೊಂಡು ವೈಯಕ್ತಿಕವಾಗಿಯೂ ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *