– ಬಾವನ ನಡವಳಿಕೆಯಿಂದ ಮನನೊಂದು ಕೃತ್ಯ
– ಆರೋಪಿಗಳು 48 ಗಂಟೆಯಲ್ಲಿ ಸೆರೆ
ಹಾಸನ: ಅಕ್ಕನಿಗೆ ಬಾವ ಕಿರುಕುಳ ನೀಡುತ್ತಾನೆ ಎಂದು ಬಾವನನ್ನೇ ಕೊಂದ ಬಾಮೈದನನ್ನು 48 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಬಾವನನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಬಾವನನ್ನು ಕೊಂದಿರುವ ಆರೋಪದ ಮೇಲೆ ಅನುಕೂಲ್, ಸುದೀನ್ ಕುಮಾರ್ ಜೆ.ಸಿ. (ಆದರ್ಶ್) ಸುರೇಶ್ ಬಿ.ಎಸ್, ಸತೀಶ್ ಎಚ್.ಬಿ ನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ಕೆಇಬಿ ನೌಕರನಾಗಿದ್ದು, 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು. ಆದರೆ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗಿರಲಿಲ್ಲ. ಪ್ರತಿದಿನ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಅಕ್ಕನಿಗೆ ಬಾವ ಕೊಡುತ್ತಿದ್ದ ಕಿರುಕುಳವನ್ನು ನೋಡುತ್ತಿದ್ದ ಬಾಮೈದ ಮನನೊಂದಿದ್ದನು. ಸಾಕಷ್ಟು ಬಾರಿ ರಾಜಿ ಸಂಧಾನವನ್ನು ಮಾಡಿದ್ದಾರೆ. ಆದರೆ ಸಂತೋಷ್ ಮಾತ್ರ ಸರಿಹೋಗಲಿಲ್ಲ.
ಈ ವಿಚಾರವಾಗಿ ಕೋಪಗೊಂಡಿದ್ದ ಬಾಮೈದ ಆದರ್ಶ್, ಬಾವನನ್ನು ಮಾತನಾಡಲು ಕರೆದಿದ್ದಾನೆ. ಈ ವೇಳೆ ತನ್ನ ಸಂಬಂಧಿಕರೊಂದಿಗೆ ಸೇರಿ ಸಂತೋಷ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ದುಷ್ಕರ್ಮಿಗಳು ಎಂಟು ಸುತ್ತು ಗುಂಡು ಹಾರಿಸಿದ್ದಾರೆ. ಇವುಗಳಲ್ಲಿ ಸಂತೋಷ್ ದೇಹಕ್ಕೆ ಐದು ಗುಂಡುಗಳು ಬಡಿದು ಸಾವನ್ನಪ್ಪಿದ್ದನು.
ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಒಂದು ರಿವಾಲ್ವರ್, 29 ಸಜೀವ ಗುಂಡುಗಳು, ಒಂದು ಡಸ್ಟರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜನವರಿ 16 ರಂದು ಕೆಇಬಿ ನೌಕರ ಸಂತೋಷ್ ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇದೀಗ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.