ಅಂತರ್‌ಜಿಲ್ಲಾ ಓಡಾಟಕ್ಕೆ ಪಾಸ್ ಕಡ್ಡಾಯ – ಬಸ್ಸಿನಲ್ಲಿ ತೆರಳುವವರಿಗೆ ಇಲ್ಲ

Public TV
2 Min Read

ಬೆಂಗಳೂರು: ಅಂತರ್ ಜಿಲ್ಲೆಗಳ ಮಧ್ಯೆ ಬಸ್ಸಿನಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಪಾಸ್ ಅಗತ್ಯವಿಲ್ಲ. ಆದರೆ ಅಂತರ್ ಜಿಲ್ಲೆಗಳ ನಡುವೆ ಖಾಸಗಿ ವಾಹನದಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಸರ್ಕಾರ ಪಾಸ್ ಕಡ್ಡಾಯ ಮಾಡಿದೆ.

ಹೌದು. ಲಾಕ್‍ಡೌನ್ 3 ಜಾರಿಯಾದಾಗ ಯಾವೆಲ್ಲ ಷರತ್ತುಗಳು ಇತ್ತೋ ಆ ಎಲ್ಲ ಷರತ್ತುಗಳು ಅನ್ವಯವಾಗುತ್ತದೆ. ಅಂದರೆ ಖಾಸಗಿ ವ್ಯಕ್ತಿಗಳು ಸೇವಾ ಸಿಂಧು ವೆಬ್‍ಸೈಟ್ ಮೂಲಕ ದಾಖಲೆಗಳನ್ನು ಸಲ್ಲಿಸಿ ಪಾಸ್ ಪಡೆದು ತೆರಳಬೇಕಾಗುತ್ತದೆ.

ಸರ್ಕಾರಿ ನೌಕರರು, ಸಿಬ್ಬಂದಿಗೆ, ಕಂಪನಿಗಳ ಉದ್ಯೋಗಿಗಳಿಗೆ ಅಂತರ ಜಿಲ್ಲಾ ಪಾಸ್ ಅಗತ್ಯವಿಲ್ಲ. ಈ ವ್ಯಕ್ತಿಗಳು ಪೊಲೀಸರಿಗೆ ಐಡಿ ಕಾರ್ಡ್ ತೋರಿಸಿದರೆ ಅನುಮತಿ ನೀಡಲಾಗುತ್ತದೆ. ಖಾಸಗಿ ವಾಹನದಲ್ಲಿ ಹೋಗುವವರಿಗೆ ಮಾತ್ರ ಪಾಸ್ ಕಡ್ಡಾಯ ಮಾಡಲಾಗಿದೆ. ಟ್ಯಾಕ್ಸಿ ಯಲ್ಲಿ ಚಾಲಕರೊಂದಿಗೆ ಇಬ್ಬರು, ಮ್ಯಾಕ್ಸಿ ಕ್ಯಾಬ್ ನಲ್ಲಿ ಮೂರು ಜನ ಮತ್ತು ಚಾಲಕರು ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ನಾಲ್ಕನೇ ಹಂತದ ಲಾಕ್ ಡೌನ್ ಅನುಷ್ಠಾನ ಕುರಿತಂತೆ ಮುಖ್ಯಮಂತ್ರಿಗಳು ನಡೆಸಿದ ಸಭೆಯ ಮುಖ್ಯಾಂಶಗಳು

1. ಲಾಕ್ ಡೌನ್ 4ನೇ ಹಂತದಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಯಾವ ಯಾವ ಚಟುವಟಿಕೆಗಳಿಗೆ ಅನುಮತಿ ನೀಡಬೇಕು, ನೀಡಬಾರದು ಎಂಬ ಕುರಿತು ಇಂದು ಸಚಿವ ಸಂಪುಟದ ಸದಸ್ಯರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಯಿತು.

2. ಕೋವಿಡ್ 19 ಸೋಂಕು ನಿಯಂತ್ರಿಸುವ ಜೊತೆಗೆ ಅನುಮತಿಸಿರುವ ಚಟುವಟಿಕೆಗಳನ್ನು ನಿರ್ವಹಿಸುವ ಬಗ್ಗೆ, ಹೊರ ರಾಜ್ಯದಿಂದ, ಹೊರ ದೇಶಗಳಿಂದ ರಾಜ್ಯಕ್ಕೆ ಹಿಂತಿರುಗುವ ಜನರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡುವ ಬಗ್ಗೆ, ಸಾರ್ವಜನಿಕರ ಸಾರಿಗೆ ಪ್ರಾರಂಭಿಸುವ ಬಗ್ಗೆ, ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲಾಯಿತು.

3. ಕಂಟೇನ್ ಮೆಂಟ್ ಝೋನ್ ಗಳಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಪಾಲನೆ ಮಾಡಲಾಗುವುದು. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

4. ಕಂಟೇನ್ ಮೆಂಟ್ ಝೋನ್ ಹೊರತು ಪಡಿಸಿ ಇತರ ಸ್ಥಳಗಳಲ್ಲಿ ಎಲ್ಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಗಳ ಓಡಾಟಕ್ಕೆ ಅನುಮತಿ ನೀಡಲಾಗುವುದು. ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ.

5.ಹೊರ ರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಮಾಡಲಾಗುವುದು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಅವರಿಗೆ ಪ್ರವೇಶ ನೀಡಲಾಗುವುದು. ಭಾನುವಾರ ಸಂಪೂರ್ಣ ಲಾಕ್ ಡೌನ್ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ಉದ್ಯಾನವನಗಳನ್ನು ಬೆಳಿಗ್ಗೆ 7 ರಿಂದ 9 ಗಂಟೆ ಹಾಗೂ ಸಂಜೆ 5 ರಿಂದ 7 ರವರೆಗೆ ತೆರೆಯಬಹುದು.

Share This Article
Leave a Comment

Leave a Reply

Your email address will not be published. Required fields are marked *