ಅಂತಾರಾಜ್ಯ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್- ಪ್ರವಾಸಿಗರ ನಿರ್ಬಂಧ: ಚಾಮರಾಜನಗರ ಡಿಸಿ

Public TV
1 Min Read

– ಗೂಡ್ಸ್ ವಾಹನ ಚಾಲಕರಿಗೂ ಕ್ವಾರಂಟೈನ್

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೋಂಕಿನ ನಿಯಂತ್ರಣಕ್ಕೆ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಂಡಿದ್ದು, ಅಂತಾರಾಜ್ಯ ಪ್ರಯಾಣಿಕರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಸೇರಿದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ತಮಿಳುನಾಡಿನಿಂದ ಚಾಮರಾಜನಗರಕ್ಕೆ ಬರುವ ನಾಲ್ ರೋಡ್ ಮತ್ತು ಪಾಲರ್ ರೋಡ್ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಸೇವಾ ಸಿಂಧು ಆ್ಯಪ್ ಮೂಲಕ ನೋಂದಣಿ ಮಾಡಿಸಿಕೊಂಡು ಬಂದರೇ ಸಾಂಸ್ಥತಿಕ ಕ್ವಾರೈಂಟನ್‍ಗೆ ಒಳಗಾಗಬೇಕು. ಗೂಡ್ಸ್ ಚಾಲಕರಲ್ಲಿ ಕೊರೊನಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆ ಕೇರಳ ಮತ್ತು ತಮಿಳುನಾಡಿಗೆ ಚಾಲಕರು ಹೋಗಿ ಬಂದರೆ ಮೂರು ದಿನಗಳ ಸಾಂಸ್ಥಿಕ ಕ್ವಾರೈಂಟನ್‍ಗೆ ಒಳಗಾಗಬೇಕು ಎಂದು ತಿಳಿಸಿದ್ದಾರೆ.

ಉಳಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಗಮಿಸುವುದಕ್ಕೆ ನಿರ್ಬಂಧ ವಿಧಿಸಿದ್ದು, ರಾಜ್ಯದಲ್ಲಿ ಈಗಾಗಲೇ ಘೋಷಣೆ ಮಾಡಿರುವ ಭಾನುವಾರದ ಲಾಕ್‍ಡೌನನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.

ರಸ್ತೆ ಬಂದ್: ಕಿಲ್ಲರ್ ಕೊರೊನಾ ಸಮುದಾಯ ಸಂಪರ್ಕದ ಹಂತ ತಲುಪಿದ್ದು, ಜನರ ಆತಂಕ ದುಪ್ಪಟ್ಟಾಗಿದೆ. ಹೀಗಾಗಿ ಹಲವೆಡೆ ಸ್ವಯಂಪ್ರೇರಿತವಾಗಿ ವ್ಯಾಪಾರ, ರಸ್ತೆ, ನಗರಗಳನ್ನು ಲಾಕ್‍ಡೌನ್ ಮಾಡಿಕೊಳ್ಳಲಾಗುತ್ತಿದೆ. ಆ ಮೂಲಕ ವೈರಸ್ ಹರಡದಂತೆ ಎಚ್ಚರಿಕೆ ವಹಿಸಲು ಜನರು ಮುಂದಾಗಿದ್ದಾರೆ.

ಕೊರೊನಾದಿಂದ ರಕ್ಷಣೆ ಪಡೆದುಕೊಳ್ಳಲು ನಮ್ಮ ಗ್ರಾಮದತ್ತ ಯಾರು ಬರಬಾರದೆಂದು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಜೆಸಿಬಿ ಮೂಲಕ ರಸ್ತೆಯನ್ನು ಅಗೆದು, ಅಡ್ಡಲಾಗಿ ಮುಳ್ಳಿನ ಗಿಡಗಳನ್ನು ಇಟ್ಟು ಲಾಕ್‍ಡೌನ್ ಮಾಡಿಕೊಂಡಿರುವ ಘಟನೆ ಇಂದು ಚಾಮರಾಜನಗರ-ತಮಿಳುನಾಡು ಗಡಿಯ ಎಲ್ಲೆಕಟ್ಟೆ ಚೆಕ್‍ಪೋಸ್ಟ್ ನಲ್ಲಿ ನಡೆದಿದೆ.

ಅಧಿಕಾರಿಗಳನ್ನು ನಂಬಿಕೊಂಡು ಕುಳಿತರೆ ನಮ್ಮ ಗ್ರಾಮಕ್ಕೆ ಕೊರೊನ ಕಾಲಿಡುವುದು ಗ್ಯಾರಂಟಿ ಎಂದು ಅರಿತ ಎಲ್ಲೆಕಟ್ಟೆ ಗ್ರಾಮಸ್ಥರು, ಇಂದು ಗ್ರಾಮದ ಮೂಲಕ ಯಾರು ಸಹ ಮುಂದೆ ಪ್ರವೇಶ ಮಾಡಬಾರದೆಂದು ಜೆಸಿಬಿ ಮೂಲಕ ಚೆಕ್‍ಪೋಸ್ಟ್ ಬಳಿ ರಸ್ತೆಯನ್ನು ಅಗೆದು ಸಂಪರ್ಕ ಕಟ್ ಮಾಡಿದ್ದಾರೆ. ಆ ಮೂಲಕ ಗ್ರಾಮವನ್ನು ಸ್ವಯಂ ಲಾಕ್‍ಡೌನ್ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *